ಸರ್ವಜ್ಞ ದೀನ ದಲಿತರ ಕಲ್ಯಾಣಕ್ಕಾಗಿ ಕೊಡುಗೆ ನೀಡಿದ ಶ್ರೇಷ್ಠ ಕವಿ: ಶಾಸಕ ಎಂ.ಕೆ.ಸೋಮಶೇಖರ್

Update: 2018-02-20 17:42 GMT

ಮೈಸೂರು,ಫೆ.20: ತ್ರಿಪದಿಗಳ ಮೂಲಕ ತಮ್ಮ ವಿಚಾರ ಧಾರೆಗಳನ್ನು ಸಮಾಜಕ್ಕೆ ನೀಡಿ ಹಿಂದುಳಿದ, ದೀನ ದಲಿತರ ಕಲ್ಯಾಣಕ್ಕಾಗಿ ತನ್ನದೇ ಆದ ಕೊಡುಗೆ ನೀಡಿದ ಸರ್ವಜ್ಞ ಓರ್ವ ಶ್ರೇಷ್ಠ ಕವಿ ಎಂದು ಶಾಸಕ ಎಂ.ಕೆ ಸೋಮಶೇಖರ್ ಬಣ್ಣಿಸಿದರು.

ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂತಕವಿ ಸರ್ವಜ್ಞರ ಜಯಂತ್ಯೋತ್ಸವವನ್ನು ಪುಷ್ಪಾರ್ಚನೆಗೈದು ಗೌರವ ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸರ್ವಜ್ಞರು ಈ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ತ್ರಿಪದಿಗಳ ಮೂಲಕ ತಮ್ಮ ಅನುಭವದ ವಿಚಾರಧಾರೆಗಳನ್ನು ವಚನಗಳ ಮೂಲಕ ಸುಲಭವಾಗಿ ಅರ್ಥವಾಗುವಂತೆ ರೂಪಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅವರು ಒಂದು ಜಾತಿಗೆ ಸೀಮಿತವಾದವರಲ್ಲ. ಬಸವಣ್ಣ, ಅಂಬೇಡ್ಕರ್, ಅಕ್ಕಮಹಾದೇವಿ, ಚನ್ನಬಸವಣ್ಣ ಸೇರಿದಂತೆ ಹಲವು ಶರಣರ ಸಾಲಿಗೆ ಸೇರಿದವರು. ಅಂದಿನ ಕಾಲದಲ್ಲಿಯೇ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬುದನ್ನು ಪ್ರತಿಪಾದಿಸಿ ಜಾತಿ ರಹಿತವಾದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ ಮಹಾನ್ ಸಂತ ಸರ್ವಜ್ಞ ಮೂರ್ತಿ ಎಂದು ಹೇಳಿದರು.

ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ನೀಡದ ವಿಚಾರಧಾರೆಗಳಿಲ್ಲ. ಅವರಲ್ಲಿ ಜ್ಞಾನದ ಭಂಡಾರವೇ ಅಡಗಿತ್ತು. ಹಾಗಾಗಿ ಈ ನಾಡಿಗೆ ತನ್ನದೇ ಆದ ಕೊಡುಗೆ ನೀಡಿ ಗ್ರಾಮೀಣ ಪ್ರದೇಶಗಳ ಎಲ್ಲಾ ಜನರ ಜನ ಮಾನಸದಲ್ಲಿ ಅಚ್ಚಳಿಯಾಗಿ ಉಳಿದಿರುವ ಸರ್ವಜ್ಞರು ಇಂದಿಗೂ ಎಂದೆಂದಿಗೂ ಸಾರ್ವಕಾಲಿಕ. ಅದಕ್ಕಾಗಿ ಕರ್ನಾಟಕ ಸರ್ಕಾರ ಸರ್ವಜ್ಞನ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಪ್ರತಿಷ್ಠಾಪಿಸಿದೆ. ಹಾಗೆಯೇ ತಿರುವಳ್ಳೂರು ಪ್ರತಿಮೆಯನ್ನು ಬೆಂಗಳೂರಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇವರಿಬ್ಬರು ಸಂತ ಶ್ರೇಷ್ಠರು. ಅವರ ಆದರ್ಶ ವಚನಗಳು ಇಂದಿಗೂ ಪ್ರಸ್ತುತ. ಮನುಷ್ಯನಿಗೆ ಶತ್ರುಗಳೆಂದರೆ ಪಂಚೇಂದ್ರಿಯಗಳು. ಅವುಗಳ ನಿಗ್ರಹವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಬಹಳ ಮುಖ್ಯ. ಸಂಘಟನೆ ಇಲ್ಲದಿದ್ದರೆ ಸಂವಿಧಾನದತ್ತವಾಗಿ ಬರುವ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ಸಮಾಜ ಸಂಘಟಿತವಾಗುವುದು ಬಹಳ ಮುಖ್ಯ. ಇಲ್ಲದಿದ್ದರೆ ಎಲ್ಲಾ ಸೌಲಭ್ಯಗಳು ಬಲಿಷ್ಠರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ಸಮಾಜದ ಏಳಿಗೆಗೆ ಅಹರ್ನಿಶಿ ದುಡಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ತಾಯೂರು ವಿಠಲ ಮೂರ್ತಿ, ಪ್ರಾಧ್ಯಾಪಕ ಆರ್.ಗುರುಸ್ವಾಮಿ, ಕುಂಬಾರ ಸಂಘದ ಮುಖಂಡರಾದ ರೇಣುಕಾಂಬ, ರಾಮು, ತಿಮ್ಮ ಶೆಟ್ಟಿ, ಹರೀಶ್, ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News