ಪತ್ರಕರ್ತನೊಬ್ಬನ ಜೀವನೋತ್ಸಾಹ

Update: 2018-02-21 18:44 GMT

ಪತ್ರಿಕೋದ್ಯಮದಲ್ಲಿ ‘ಪಗೋ’ ಎಂದೇ ಗುರುತಿಸಲ್ಪಡುವ ಪದ್ಯಾಣ ಗೋಪಾಲಕೃಷ್ಣ ಅವರು 1956ರಲ್ಲಿ ಕನ್ನಡ ದಿನ ಪತ್ರಿಕೆ ‘ವಿಶ್ವ ಕರ್ನಾಟಕ’ ಮುಖಾಂತರ ಗುರುತಿಸಿಕೊಂಡವರು. ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲೂ ಸೇವೆ ಸಲ್ಲಿಸಿದರು. 1959ರ ಸುಮಾರಿಗೆ ಮಂಗಳೂರಿಗೆ ಬಂದು ನೆಲೆಸಿ ನವಭಾರತ, ಕನ್ನಡ ವಾಣಿ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿ, ಆನಂತರ ಇಂಡಿಯನ್ ಎಕ್ಸ್‌ಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಕೆಲಸ ಮಾಡಿದರು. ಬಳಿಕ ಅಂಣಕಾರರಾಗಿಯೂ ಗುರುತಿಸಿಕೊಂಡರು.

  ಪತ್ರಕರ್ತನ ಬದುಕು ಹೊರಗೆ ನೋಡಿದಾಗ ಅತ್ಯಂತ ರಮ್ಯ ಮತ್ತು ರೋಚಕವಾಗಿರುತ್ತದೆ. ಆದರೆ ಆತ ತನ್ನ ವೈಯಕ್ತಿಕವಾದ ಎಲ್ಲ ಬದುಕನ್ನು ಒತ್ತೆಯಿಟ್ಟು ಪತ್ರಿಕೆಗೆ ತನ್ನನ್ನು ಅರ್ಪಿಸಿಕೊಳ್ಳಬೇಕಾಗುತ್ತದೆ. ಡೆಡ್‌ಲೈನ್‌ನ ಕತ್ತಿಮೇಲೆ ನಡೆಯುತ್ತಾ ಸುದ್ದಿಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರ ಜೊತೆಗೆ, ಮಾಲಕರ ಜೊತೆಗೂ ಅವರು ಮುಖಾಮುಖಿಯಾಗಬೇಕಾಗುತ್ತದೆ. 50ರ ದಶಕದಲ್ಲಿ ತಂತ್ರಜ್ಞಾನ ಇಷ್ಟು ಅಭಿವೃದ್ಧಿಗೊಂಡಿರಲಿಲ್ಲ. ಮೊಬೈಲ್‌ಗಳು ಬಿಡಿ, ದೂರವಾಣಿಯೇ ಇರಲಿಲ್ಲ. ಫೋಟೊಗಳನ್ನು ತೆಗೆಯುವ, ಅದನ್ನು ಕಚೇರಿಗೆ ರವಾನಿಸುವ ಸುಲಭ ವ್ಯವಸ್ಥೆಯೂ ಇದ್ದಿರಲಿಲ್ಲ. ಸಾರಿಗೆ ಸಂಪರ್ಕದ ಕೊರತೆಯೂ ಇತ್ತು. ಇವೆಲ್ಲವುಗಳ ನಡುವೆ ಒಬ್ಬ ವರದಿಗಾರ ತನ್ನ ವರದಿಯನ್ನು ತಯಾರಿಸಬೇಕಾಗಿತ್ತು. ಈ ಎಲ್ಲ ಅನುಭವಗಳು ಇಂದಿನ ಪತ್ರಕರ್ತರಿಗೆ ಒಂದು ಆದರ್ಶವಾಗಿದೆ. ಇಂದು ಇಂಟರ್‌ನೆಟ್, ವಿಕಿಪೀಡಿಯಾ, ಗೂಗಲ್‌ಗಳನ್ನು ಆಧರಿಸಿಕೊಂಡು ಪತ್ರಕರ್ತರಾಗುವುದು ತುಂಬಾ ಸುಲಭ. ಸಾಮಾಜಿಕ ತಾಣಗಳಲ್ಲಿ ನಾಲ್ಕು ಬರಹಗಳನ್ನು ಬರೆದಾಕ್ಷಣ ತನಗೆ ತಾನೇ ಲೇಖಕನಾಗಿ ಬಿಡುತ್ತಾನೆ. ಇಂತಹ ಸಂದರ್ಭದಲ್ಲಿ ನಿಜವಾದ ಅರ್ಥದಲ್ಲಿ ಎಲ್ಲ ತೊಡಕುಗಳು ಸವಾಲುಗಳನ್ನು ಎದುರಿಸಿ ಪತ್ರಕರ್ತರಾಗಿ ಗುರುತಿಸಿಕೊಂಡ ಹಿರಿಯರ ನೆನಪುಗಳನ್ನು ಓದುವುದು ಅತ್ಯಗತ್ಯ. ಈ ಕಾರಣದಿಂದ ಪದ್ಯಾಣ ಗೋಪಾಲಕೃಷ್ಣ ಅವರ ಜೀವನೋತ್ಸಾಹದ ಸಂಕಥನ ‘‘ಅನುಭವ ಅನುಭಾವಗಳ ನಡುವೆ’’ ಕೃತಿ ಮುಖ್ಯವಾಗುತ್ತದೆ.
ಪಗೋ ಅವರ ಬರಹಗಳು ವಿಶಿಷ್ಟ ಮತ್ತು ಕಚಗುಳಿ ಇಡುತ್ತವೆ ಮಾತ್ರವಲ್ಲ, ಅಷ್ಟೇ ಹರಿತವಾದ ವ್ಯಂಗ್ಯವನ್ನು ಹೊಂದಿವೆ. ಪತ್ರಿಕೋದ್ಯಮದೊಳಗಿರುವ ಕಷ್ಟ ಕಾರ್ಪಣ್ಯ ಮಾತ್ರವಲ್ಲ, ಇತರ ರಾಜಕೀಯಗಳನ್ನೂ ಈ ಕೃತಿ ಸರಳವಾಗಿ ತೆರೆದಿಡುತ್ತದೆ. ಜೀವನೋತ್ಸಾಹ ಮತ್ತು ಜೀವ ಕಾರುಣ್ಯ ಅವರ ಬರಹದ ಹೆಗ್ಗಳಿಕೆ. ಕಾಂತಾವರ ಕನ್ನಡ ಸಂಘದ ಸಂಸ್ಕೃತಿ ಸಂವರ್ಧನ ಮಾಲೆಯ ಭಾಗವಾಗಿ ಈ ಕೃತಿ ಹೊರ ಬಂದಿದೆ. ಪಾಂಚಜನ್ಯ ಪಬ್ಲಿಕೇಶನ್ ಕೃತಿಯನ್ನು ಮುದ್ರಿಸಿದೆ. 120 ಪುಟಗಳ ಈ ಕೃತಿಯ ಮುಖಬೆಲೆ 125 ರೂಪಾಯಿ. ಆಸಕ್ತರು 8242485539 ೂರವಾಣಿಯನ್ನು ಸಂಪರ್ಕಿಸಬಹುದು.

 

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News