ಅರಿವಿನ ಕನ್ನಡಿಯ ಮುಂದೆ....

Update: 2018-03-02 18:35 GMT

‘ಅರಿವಿನ ಕನ್ನಡಿ’ ನರಸಿಂಹ ಮೂರ್ತಿ ಹೂವಿನಹಳ್ಳಿ ಅವರ ವಿಮರ್ಶಾ ಸಂಕಲನ. ವಿಮರ್ಶೆ, ಕಾದಂಬರಿ, ಸಂಶೋಧನೆ ಹೀಗೆ ಮೂರು ವಿಭಿನ್ನ ಪ್ರಕಾರಗಳಲ್ಲಿ ಈಗಾಗಲೇ ಕೃತಿಗಳನ್ನು ಪ್ರಕಟಿಸಿರುವ ಇವರು, ಈ ಕೃತಿಯಲ್ಲಿ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳ ಸಾಹಿತ್ಯ ಕೃತಿಗಳನ್ನು ವಿಮರ್ಶೆಗೆ ಒಳಪಡಿಸಲು ಯತ್ನಿಸಿದ್ದಾರೆ. ಕುಮಾರವ್ಯಾಸನಿಂದ ಹಿಡಿದು ಕಾರ್ನಾಡ್ ವರೆಗೆ ಪ್ರಮುಖ ಲೇಖಕರ ಜೊತೆಗೇ ವಚನಯುಗವನ್ನು ಕೂಡ ಈ ಕಾಲದ ವಿಮರ್ಶಾ ನೋಟಗಳ ಮೂಲಕ ಮರು ಓದಿಗೆ ಒಳಪಡಿಸಿದ್ದಾರೆ. ಕುವೆಂಪು ಕೃತಿಗಳ ಮರು ಓದಿನ ಮೂಲಕ, ಕುವೆಂಪು ಖಂಡರಿಸುವ ಬೇರೆ ಬೇರೆ ಪಾತ್ರಗಳನ್ನು ವರ್ತಮಾನದ ರಾಜಕೀಯಕ್ಕೆ ತಳಕು ಹಾಕುತ್ತಾರೆ. ಶೋಷಿತ ಸಮುದಾಯದಿಂದ ಬಂದ ಪುರಾಣ ಪಾತ್ರಗಳನ್ನು ಮುಂದಿಟ್ಟುಕೊಂಡು, ವರ್ತಮಾನದ ಜಾತಿ ಮತ್ತು ವರ್ಗ ಸಂಘರ್ಷಗಳ ನೆಲೆಗಳನ್ನು ಶೋಧಿಸಿದ್ದಾರೆ. ಕುವೆಂಪು ಅವರ ಮಹಾಕಾದಂಬರಿಯಲ್ಲಿ ಒಂದಾದ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಅವಲೋಕಿಸುತ್ತಾ, ಅಂದಿನ ಜನರ ಬದುಕು, ನಡತೆ, ಮಕ್ಕಳ ಆಟಪಾಠಗಳು, ಪುರೋಹಿತಶಾಹಿ ಹಿಡಿತ, ಗೂಂಡಾಗಿರಿಯ ಹಿಂಸೆ, ಶೂದ್ರರ ಬದುಕಿನ ಕಷ್ಟಗಳು, ನೋವುಗಳು, ಜೀತಪದ್ಧತಿ, ಸಾರಿಗೆ ಸಂಪರ್ಕ, ಸ್ತ್ರೀಯರ ಬದುಕಿನ ವಿವರಗಳು, ಭೂಮಾಲಕರ ಕ್ರೌರ್ಯಗಳನ್ನು ಅಧ್ಯಯನ ಮಾಡಿ ಚರ್ಚೆಗೆ ಒಳಪಡಿಸಿದಾಗ ಅಂದಿಗೂ ಇಂದಿಗೂ ಬದಲಾವಣೆ ಆಗಿರುವ, ಆಗದಿರುವ ಅಂಶಗಳನ್ನು ಅವರು ಚರ್ಚಿಸತ್ತಾರೆ. ಕುಮಾರವ್ಯಾಸ ಭಾರತವನ್ನು ಅವಲೋಕಿಸುತ್ತಾ ಅದರೊಳಗಿರುವ ಸಮಕಾಲೀನ ರಾಜಕೀಯ ಸಂದೇಶಗಳನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಬೇಂದ್ರೆ ಮತ್ತು ಕುಮಾರವ್ಯಾಸನನ್ನು ಜೊತೆಗಿಟ್ಟು ನೋಡುವ ಪ್ರಯತ್ನವನ್ನೂ ಮಾಡುತ್ತಾರೆ. ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕೃತಿಯಲ್ಲಿ ಆಧುನಿಕ ಮತ್ತು ಸಂಪ್ರದಾಯದ ಸಂಘರ್ಷವನ್ನು ಕಟ್ಟಿಕೊಡುತ್ತಾರೆ. ಜಾಗತೀಕರಣ ಘಟ್ಟದ ಭಾರತವನ್ನು ತೇಜಸ್ವಿ ಅವರ ‘ಜುಗಾರಿ ಕ್ರಾಸ್’ ಕೃತಿಯಲ್ಲಿ ಅವಲೋಕಿಸುತ್ತಾರೆ. ಬೇಂದ್ರೆಯವರ ಶ್ರಾವಣ ಕವಿತೆಯಲ್ಲಿ ಹೊಸ ಹೊಳಹುಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಗಿರೀಶ್ ಕಾರ್ನಾಡ್‌ರ ‘ತುಘಲಕ್’ ಮೂಲಕ ಚರಿತ್ರೆಯ ಹೊಸ ಗ್ರಹಿಕೆಗಳನ್ನು ಗುರುತಿಸುತ್ತಾರೆ. ವಚನ ಲೋಕದೊಳಗೆ ಪ್ರವೇಶಿಸುತ್ತಾ ಅದರೊಳಗಿಂದ ಸಿಡಿದ ಪರ್ಯಾಯ ಸಂಸ್ಕೃತ ಮತ್ತು ಸಾಮಾಜಿಕ ಚಳವಳಿಯ ಹಂತಗಳನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಇಂತಹ ಒಟ್ಟು 14 ವಿಮರ್ಶಾ ಬರಹಗಳಿವೆ.
 ಪ್ರೇರಣಾ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 158 ಪುಟಗಳ ಈ ಕೃತಿಯ ಮುಖಬೆಲೆ 170 ರೂಪಾಯಿ. ಆಸಕ್ತರು 94805 83913 ೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News