ಫುಲೆ ಬೀಸಿದ ರೈತನ ಬಾರುಕೋಲು

Update: 2018-03-06 18:40 GMT

ಜ್ಯೋತಿಬಾ ಫುಲೆ ಆಧುನಿಕ ಭಾರತದ ಚರಿತ್ರೆಯಲ್ಲಿ ತೀಕ್ಷ್ಣ ಮುನ್ನೋಟವಿದ್ದ ಸಮಾಜ ಸುಧಾರಕ, ಸಾಮಾಜಿಕ ಕ್ರಾಂತಿಯ ಹರಿಕಾರ. ಮಹಾರಾಷ್ಟ್ರದ ಶೂದ್ರ ಉಪಜಾತಿಯಾದ ಮಾಲಿ ಜಾತಿಯಲ್ಲಿ ಹುಟ್ಟಿದ ಇವರು ಜಾತಿ ವಿನಾಶ ಚಳವಳಿ, ರೈತ ಹೋರಾಟ, ಪರಿಸರ ಹೋರಾಟ, ಮಹಿಳಾ ಹೋರಾಟಗಳಲ್ಲಿ ಮೊದಲಿಗರು. ಅವರ ಹೋರಾಟದ ಮೂಸೆಯಲ್ಲಿ ಅರಳಿರುವ ಕೃತಿ ‘ರೈತನ ಬಾರುಕೋಲು’. ಇದನ್ನು ತೆಲುಗಿನಲ್ಲಿ ಹಾರತಿ ವಾಗೀಶನ್ ಅವರು ಅನುವಾದಿಸಿದ್ದು, ತೆಲುಗಿನಿಂದ ನಂಜುಂಡಾಚಾರಿ ಕನ್ನಡಕ್ಕಿಳಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಕೃತಿಯನ್ನು ಹೊರತಂದಿದೆ.
 ರೈತನ ಬಾರುಕೋಲು ಮುಖವಾಗಿ ಮಧ್ಯಮವರ್ಗದ ಮತ್ತು ಸಣ್ಣ ರೈತರು ವಸಾಹತುಕಾಲದ ಮಹಾರಾಷ್ಟ್ರದಲ್ಲಿ ಎದುರಿಸಿದ ಸಂಕಷ್ಟಗಳನ್ನು ಅಂದಿನ ಗವರ್ನರ್ ಜನರಲ್‌ಗೆ ವಿವರಿಸುವ ಪ್ರಯತ್ನವಾಗಿದೆ. ಅಂದಿನ ರೈತಾಪಿ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನಚಿತ್ರವನ್ನು ಈ ಕೃತಿ ಗಾಢವಾಗಿ ನಮ್ಮ ಮನಸ್ಸಿಗೆ ಮುಟ್ಟುವಂತೆ ಮಾಡುತ್ತದೆ. ಅಂದಿನ ಸಮಾಜದ ದುಸ್ಥಿತಿಯನ್ನು ಮೇಲೆ ತರುವಲ್ಲಿ ಬ್ರಿಟಿಷ್ ಆಡಳಿತಗಾರರು ಸಮರ್ಥರು ಎನ್ನುವುದನ್ನು ಅರಿತವರು ಫುಲೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಮಾಜವನ್ನು ಬ್ರಿಟಿಷರಿಗೆ ಮನವರಿಕೆ ಮಾಡುವ ಉದ್ದೇಶವನ್ನು ಕೃತಿ ಹೊಂದಿದೆ. ಶೋಷಣಾ ಪ್ರಧಾನವಾದ ವಸಾಹತು ಆಡಳಿತದಲ್ಲಿ ವೌಲಿಕವಾಗಿ ಬಯಲು ಸೀಮೆಯ ಕಪ್ಪು ಮಣ್ಣಿನ ನೆಲವಿರುವ ಮಹಾರಾಷ್ಟ್ರ ರೈತರು ಎದುರಿಸುತ್ತಿದ್ದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಣೆಯಾಗಿದೆ ಈ ಕೃತಿ. 1883ರಲ್ಲಿ ಕೃತಿ ಪ್ರಕಟವಾಯಿತು.
ಇಲ್ಲಿ ಒಟ್ಟು 5 ಅಧ್ಯಾಯಗಳಿವೆ. ಸ್ವಾರ್ಥಿಗಳಾದ ಭಟ್ ಬ್ರಾಹ್ಮಣರ ಆಧಿಪತ್ಯ, ಬಿಳಿಯ ನೌಕರರು ಮತ್ತು ಅವರ ಭೋಗ ಲಾಲಸೆ, ಆರ್ಯ ಬ್ರಾಹ್ಮಣರ ಚರಿತ್ರೆ, ಇಂದಿನ ವ್ಯವಸಾಯ, ರೈತರ ಸ್ಥಿತಿಗತಿಗಳು, ಶೂದ್ರ ರೈತರ ಪರವಾಗಿ ಸೂಚನೆಗಳು ಮತ್ತು ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಈ ಕೃತಿಯಲ್ಲಿ ವಿವರಗಳಿವೆ. ವರ್ತಮಾನದ ಸಾಂಸ್ಕೃತಿಕ ರಾಜಕೀಯವನ್ನು ಎದುರಿಸುವುದಕ್ಕೆ ಬೇಕಾದ ಸಮಿತ್ತುಗಳನ್ನು ನಾವು ಈ ಕೃತಿಯಿಂದ ಪಡೆದುಕೊಳ್ಳಬಹುದಾಗಿದೆ.98 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ. ಆಸಕ್ತರು 93410 88736 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News