ಗುಂಡು ಹಾರಿಸಿ ಅಧ್ಯಾಪಕನನ್ನೇ ಹತ್ಯೆಗೈದ ವಿದ್ಯಾರ್ಥಿ !
Update: 2018-03-13 14:59 GMT
ರೋಹ್ಟಕ್, ಮಾ. 13: ಇಲ್ಲಿನ ಕಾಲೇಜಿನ ಅಧ್ಯಾಪಕರನ್ನು ವಿದ್ಯಾರ್ಥಿಯೋರ್ವ ಗುಂಡು ಹಾರಿಸಿ ಹತ್ಯೆಗೈದ ಘಟನೆ ಮಂಗಳವಾರ ಸಂಭವಿಸಿದೆ.
ಸೋನೆಪತ್ನ ಪೀಪ್ಲಿ ಗ್ರಾಮದ ಶಹೀದ್ ದಲ್ಬೀರ್ ಸಿಂಗ್ ಕಾಲೇಜಿನ ಆವರಣದಲ್ಲಿ ಸಂಭವಿಸಿದ ಈ ಘಟನೆ ಹಿಂದಿನ ಉದ್ದೇಶ ಇದುವರೆಗೆ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅದ್ಯಾಪಕ ರಾಜೇಶ್ ಸಿಂಗ್ ತರಗತಿಯಲ್ಲಿ ಕುಳಿತುಕೊಂಡಿದ್ದಾಗ, ವಿದ್ಯಾರ್ಥಿಯೋರ್ವ ಅವರ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿ ಪರಾರಿಯಾದ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬೆಳಗ್ಗೆ 8.30ರಿಂದ 9.30ರ ನಡುವೆ ಸಂಭವಿಸಿದೆ. ತನಿಖೆ ಮುಂದುವರಿದಿದೆ. ಗುಂಡು ಹಾರಿಸಿದ ವಿದ್ಯಾರ್ಥಿ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಗುಂಡು ಹಾರಿಸಿದ ಉದ್ದೇಶವೂ ತಿಳಿದು ಬಂದಿಲ್ಲ ಎಂದು ಇಲ್ಲಿನ ಪೊಲೀಸ್ ಠಾಣೆ ಅಧಿಕಾರಿ ವಿರೇಂದ್ರ ಸಿಂಗ್ ಹೇಳಿದ್ದಾರೆ.