ಮುಂಡಗೋಡ: ನಕಲಿ ಪಾಸ್ ಬಳಸಿ ಅಕ್ರಮ ಮರಳು ಸಾಗಾಟ; ಆರೋಪಿಗಳ ಬಂಧನ

Update: 2018-03-17 11:33 GMT

ಮುಂಡಗೋಡ,ಮಾ.17: ಅಕ್ರಮವಾಗಿ ಮರಳು ಸಾಗಿಸಲು ನಕಲಿ ಪಾಸ್‍ಗಳನ್ನು ತಯಾರಿಸಿ, ಮರಳು ಸಾಗಿಸುತ್ತಿದ್ದ ತಂಡವನ್ನು ಪತ್ತೆಹಚ್ಚಿದ ಪೊಲೀಸರು ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ಸಹಿತ ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಂಕೋಲಾ ತಾಲೂಕಿನ ಸುನೀಲ ತಿಪ್ಪಣ್ಣ ಉಪ್ಪಾರ, ಹೊನ್ನಪ್ಪ ರಾಮಾಗೌಡಾ, ಪ್ರಭಾಕರ ಗೌಡ, ಸಂತೋಷ ವೆಂಕಟರಾಯ ನಾಯಕ, ಸತೀಶ ಮೋಹನ ನಾಯಕ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಖರೀದಿಸಿ ಮಾರಾಟ ಮಾಡಿರುವ ಮುಂಡಗೋಡಿನ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.

ಬುಧವಾರ ಸಂಜೆ ಟಿಬೇಟ್ ಕ್ಯಾಂಪ್‍ಹತ್ತಿರ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಗಳನ್ನು ಪಿಐ ಕಿರಣ್ ಕುಮಾರ್ ತಂಡ ಪರಿಶೀಲನೆ ನಡೆಸಿದಾಗ ಚಾಲಕರು ಪಾಸ್ ತೋರಿಸಿದ್ದಾರೆ. ಪಾಸ್‍ಗಳನ್ನು ನೋಡಿದಾಗ ಒರಿಜನಲ್ ಪಾಸ್ ರೀತಿ ಕಂಡುಬಂದರೂ, ಅನುಮಾನಗೊಂಡು ಆನ್‍ಲೈನ್‍ನಲ್ಲಿ ಚೆಕ್ ಮಾಡಿದಾಗ ಚಾಲಕರು ತೋರಿಸಿದ ಪಾಸ್ ನಕಲಿ ಎಂದು ಗೊತ್ತಾಗಿದೆ. ಕೂಡಲೇ ಎರಡು ಟಿಪ್ಪರ್ ಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಾಗ ನಕಲಿ ಪಾಸ್ ತಯಾರಿಕಾ ಕೇಂದ್ರ ಅಂಕೋಲಾದಲ್ಲಿ ಇದೆ, ಅಲ್ಲಿಂದಲೇ ನಕಲಿ ಪಾಸ್ ಗಳನ್ನು ತಯಾರಿಸಿ ಮರಳು ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ.

ಆರೋಪಿ ಸಂತೋಷ್ ನಾಯಕ(ಟಿಪ್ಪರ ಮಾಲಿಕ) ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸುನೀಲ ಉಪ್ಪಾರನ ಸ್ನೇಹ ಬೆಳೆಸಿ ನಕಲಿ ಪಾಸ್‍ಗಳನ್ನು ತಯಾರು ಮಾಡಿಕೊಡುವಂತೆ ಕೇಳಿದ್ದ. ಅದರಂತೆ ಫೋಟೊಶಾಪ್ ನಲ್ಲಿ ನಕಲಿ ಪಾಸ್‍ಗಳ್ನು ತಯಾರು ಮಾಡಿ ಈ ಹಿಂದೆ ಬಳಕೆಯಾಗಿದ್ದ ಅಸಲಿ ಪಾಸ್‍ಗಳ ಮೇಲಿರುವ ಹೋಲೊ ಗ್ರಾಮ್ ಮುದ್ರೆಯನ್ನು ಕಿತ್ತು ನಕಲಿ ಪಾಸ್‍ಗೆ ಅಂಟಿಸಿ ಮರಳು ಸರಬರಾಜು ಮಾಡಲಾಗುತ್ತಿತ್ತು. ಅಂಕೋಲಾದಲ್ಲಿ ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ ಮರುದಿನದ ಪಾಸ್ ಸಹ ತಯಾರು ಮಾಡಿರುವುದು ತಿಳಿದುಬಂದಿದೆ ಎಂದು ಕಿರಣ್ ಕುಮಾರ್ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಅವರ ಸೂಚನೆಯಂತೆ ತನಿಖೆ ಕೈಗೊಂಡಾಗ ಪ್ರಕರಣ ಹೊರಬಿದ್ದಿದೆ. ಆರೋಪಿಗಳು ಮುಂಡಗೋಡ ಯಲ್ಲಾಪುರ ಹಾಗೂ ಹಳಿಯಾಳದಲ್ಲಿ ನಕಲಿ ಪಾಸ್‍ಗಳನ್ನು ಬಳಸಿ 8-10 ಟ್ರಕ್‍ಗಳ ಮೂಲಕ ಸುಮಾರು 200 ಟ್ರಿಪ್ ಮರಳು ಸಾಗಾಟ ಮಾಡಿರುವ ಶಂಕೆಯಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ವಿಚಾರಣೆ ಒಳಪಡಿಸಬೇಕಾಗಿದೆ. ಒಂದು ಲ್ಯಾಪ್‍ಟ್ಯಾಪ್, ಪ್ರಿಂಟರ್, ನಕಲಿ ಪಾಸ್‍ಗಳು, ಹೋಲೊಗ್ರಾಮ ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಐ ಕಿರಣಕುಮಾರ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News