ತುಮಕೂರು: ಅತ್ಯಾಚಾರ ಆರೋಪಿಗೆ 9 ವರ್ಷ ಜೈಲು ಶಿಕ್ಷೆ, 15 ಸಾವಿರ ದಂಡ

Update: 2018-03-23 16:55 GMT

ತುಮಕೂರು.ಮಾ.23: ತೋಟದಲ್ಲಿ ಹೂವು ಕೀಳುತ್ತಿದ್ದ ಹೆಣ್ಣು ಮಗಳೊಬ್ಬಳನ್ನು ಅತ್ಯಾಚಾರವೆಸಗಿದ್ದ ಆರೋಪಿಗೆ ನಾಲ್ಕನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು 9 ವರ್ಷ ಜೈಲು ಹಾಗೂ 15 ಸಾವಿರ ರೂ ದಂಡವಿಧಿಸಿದ್ದಾರೆ.

ಮಧುಗಿರಿ ತಾಲೂಕಿನ ಬೋರಾಗುಂಟೆ ಗ್ರಾಮದ ನಾಗರಾಜು ಎಂಬುವವರ ತೋಟದಲ್ಲಿ ಹೂವು ಕೀಳುತ್ತಿದ್ದ ಹೆಣ್ಣು ಮಗಳೊಬ್ಬಳು, ಬಹಿರ್ದೆಸೆಗೆಂದು ಪಕ್ಕದ ತೋಟಕ್ಕೆ ಹೋಗಿ ವಾಪಸ್ಸಾಗುವ ವೇಳೆ ಅದೇ ಗ್ರಾಮದ ರಂಗನಾಥ ಎಂಬಾತ ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು ಎಂದು ಮಧುಗಿರಿ ತಾಲೂಕು ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಭಾರತೀಯ ದಂಡ ಸಂಹಿತೆ 376 ಮತ್ತು 506ರ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸದರಿ ಕೇಸಿನ ವಿಚಾರಣೆ ನಡೆಸಿದ ತುಮಕೂರಿನ ನಾಲ್ಕನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀಮತಿ ಲಾವಣ್ಯ ಲತಾ ಅವರು ಅಪರಾಧಿಗೆ ಐಪಿಸಿ ಕಲಂ 376ರ ಅಪರಾದಕ್ಕಾಗಿ 7 ವರ್ಷ ಸಜೆ ಹಾಗೂ 10 ಸಾವಿರ ರೂ ದಂಡ, 506ರ ಅಪರಾಧಕ್ಕಾಗಿ 2 ವರ್ಷ ಶಿಕ್ಷೆ ಹಾಗೂ 5000 ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News