ಮೌನದ ಸೆರಗು ಹಿಡಿದು

Update: 2018-03-30 18:44 GMT

 ಸಾಗುವ ಕವಿತೆಗಳು....
‘‘ಬರಿಗಾಲಲಿ ಹತ್ತು ಗಾವುದವಾಗಲಿ
ನೂರು ಗಾವುದವಾಗಲಿ
ನಡೆದು ಸವೆಸುವೆನು
ನನ್ನ ಬಡತನದ ಬದುಕು
ನಿನ್ನ ಸಿರಿತನಕ್ಕೆ ಏಣಿ ಆಗುವುದಾದರೆ ಆಗಲಿ ಸಂತೋಷ
ನಿನಗೆ ಅರ್ಪಿತವಾದರೆ ಸಾಕು’’

ಇಂತಹ ಭಾವಗೀತಾತ್ಮಕ ಸಾಲುಗಳನ್ನು ಬರೆಯುವ ನರಸಿಂಹ ಮೂರ್ತಿ ಹೂವಿನ ಹಳ್ಳಿ ಅವರ ‘ವೌನದ ಸೆರಗು’ ಕವನ ಸಂಕಲನ ಕನಸುಗಳ ತುಂಬಿಕೊಂಡು ಗಾಳಿಯಲ್ಲಿ ಹಾರಾಡುತ್ತಿರುವ ಬಲೂನು. ಭಾವುಕ ಸಾಲುಗಳು ಈ ಕವಿತೆಯ ಹೆಗ್ಗಳಿಕೆಯು ಹೇಗೋ ಕೆಲವೊಮ್ಮೆ ಮಿತಿಗಳನ್ನೂ ಹೇರುತ್ತದೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಸ್ಫೋಟಿಸಲಾಗದ ಸಿಟ್ಟು ಸೆಡವುಗಳನ್ನು ಒಡಲೊಳಗಿಟ್ಟು ನಮ್ಮನ್ನು ಮುಖಾಮುಖಿಯಾಗುತ್ತವೆ. ರಾಜಕೀಯ, ಸಾಮಾಜಿಕ ವಿಷಯಗಳನ್ನೂ ಮಾತನಾಡುತ್ತವೆ. ‘‘ಬಲ ಇರುವವರ ಬೆಪ್ಪು ಬೆರಗಿಗೆ ನೊಂದು
ಸೊರಗಿರುವ ಕಂದಮ್ಮಗಳ ನೆನಪಿನ ಹಾಡ ಹಾಡು’’ ಎಂದು ಬರೆಯುವ ಕವಿ ‘ಬೀಸುವ ಕಲ್ಲಿಗೆ ಕೆಲಸ ಸಿಗಲಿ/ಪದ ಕಟ್ಟಿ ಕೋಶ ಬೆಳೆಸಿದ/ಆಲದ ಮರ ಬೇರು ಬಿಡಲಿ’’ ಎಂದು ಪದ್ಯಗಳ ಮೂಲಕ ಬಯಸುತ್ತಾರೆ. ಡಾ. ನಟರಾಜ್ ಹುಳಿಯಾರ್ ಹೇಳುವಂತೆ ‘‘ಬಡತನ ಹಾಗೂ ಬಗೆ ಬಗೆಯ ದಮನಗಳನ್ನು ತಮ್ಮ ಕಾವ್ಯದ ವಸ್ತುವಾಗಿಸಿಕೊಂಡು ದುಃಖ ಹಾಗೂ ಸಿಟ್ಟಿನಿಂದ ಬರೆಯುವ ಕವಿ, ಗ್ರಾಮ ಹಾಗೂ ನಗರಗಳ ಬಿಕ್ಕಟ್ಟುಗಳ ಚಿತ್ರಗಳನ್ನು ತಮ್ಮ ಪದ್ಯಗಳಲ್ಲಿ ಜೋಡಿಸಲೆತ್ನಿಸಿದ್ದಾರೆ’’. ಸದ್ಯದ ರಾಜಕೀಯ ಸಂದರ್ಭಗಳನ್ನೂ ಕವಿ ರೂಪಕಗಳ ಮೂಲಕ ವಿವರಿಸುವ ಪ್ರಯತ್ನ ಮಾಡುತ್ತಾರೆ ‘‘ಚರಕದ ಚಕ್ರ ತಿರುಗತ್ತಿಲ್ಲ
ಚಹತ್ತಿಯ ನೂಲಿನ ಹುರಿ ಬಿಟ್ಟವರು
ನೇಯುವ ಮಗ್ಗದವರು ಮುಗ್ಗಿ ಹೋಗಿದ್ದಾರೆ
ನೀರಲ್ಲಿ ಜಾಲಿಸಿ, ಹಿಂಡಿ, ಬಿಸಿಲಿಗೆ ಹರಡಬೇಕು
ಜಾಗ ಬಿಡುತ್ತಿಲ್ಲ, ಅವರವರ ಕೆಲಸ ಕಾರ್ಯಗಳಲ್ಲಿ ಓಡಾಡುತ್ತಿದ್ದಾರೆ
ಉಪ್ಪಿಗಿಷ್ಟು ಚುರುಕು ಮುಟ್ಟಿಸಿ ಅಡುಗೆ ಮಾಡಬೇಕು(ಗಾಂಧಿ)’

ಗಾಂಧೀವಾದದ ಹತಾಶ ಸ್ಥಿತಿ, ಜಡತೆಯತ್ತ ಚಲಿಸುತ್ತಿರುವ ಗ್ರಾಮೀಣ ಭಾರತ, ಹಿಂಸಾಮಯ ಸಮಾಜ, ಅಲ್ಲಿಂದ ಹುಟ್ಟುವ ಗಾಂಧೀವಾದಕ್ಕೆ ಮರುಸ್ಪರ್ಶ ನೀಡಬೇಕೆನ್ನುವ ಆಶಯ ಇವೆಲ್ಲವನ್ನೂ ಈ ಸಾಲುಗಳು ಕಾಣಿಸಲು ಯತ್ನಿಸುತ್ತವೆ. ಸುಮಾರು 20 ಕವಿತೆಗಳು ಈ ಸಂಕಲನದಲ್ಲಿವೆ. 122 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ. ಪ್ರೇರಣಾ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಆಸಕ್ತರು 94805 83913 ದೂರವಾಣಿಯನ್ನು ಸಂಪರ್ಕಿಸಬಹುದು.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News