ಇಂದ್ರಾಣಿ ಮುಖರ್ಜಿ ಜೆಜೆ ಆಸ್ಪತ್ರೆಗೆ ದಾಖಲು

Update: 2018-04-07 05:53 GMT

ಮುಂಬೈ, ಎ.7: ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿಯವರನ್ನು ಉಸಿರಾಟದ ಸಮಸ್ಯೆಯ ಕಾರಣದಿಂದ ಶುಕ್ರವಾರ ರಾತ್ರಿ ಮುಂಬೈನ ಜೆಜೆ ಹಾಸ್ಪಿಟಲ್‌ನಲ್ಲಿ ದಾಖಲಿಸಲಾಗಿದೆ.

‘‘ಮುಖರ್ಜಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಡಿಸಿಪಿ ವೀರೇಂದ್ರ ಮಿಶ್ರಾ ಹೇಳಿದ್ದಾರೆ.

ಶುಕ್ರವಾರ ರಾತ್ರಿ 11:15ಕ್ಕೆ ಮುಖರ್ಜಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ರಕ್ತ ಹಾಗೂ ದೈಹಿಕ ಪರೀಕ್ಷೆ ನಡೆಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ಮುಖರ್ಜಿ ಐಎನ್‌ಎಕ್ಸ್ ಮೀಡಿಯಾದ ಸಹ ಸಂಸ್ಥಾಪಕಿಯಾಗಿದ್ದು, ಪ್ರಸ್ತುತ ಬೈಕುಲಾದ ಮಹಿಳಾ ಜೈಲಿನಲ್ಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಮುಖರ್ಜಿ ಹಾಜರಾಗಿದ್ದರು. ಸಂಜೆ 5 ಗಂಟೆಗೆ ಜೈಲಿಗೆ ವಾಪಸಾಗಿದ್ದರು. ರಾತ್ರಿ 10:30ರ ಸುಮಾರಿಗೆ ಮುಖರ್ಜಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು, ಜೈಲು ಅಧಿಕಾರಿಗಳು ಮುಖರ್ಜಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News