ಬಲೂನ್ ಗೆ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟ: ಯುವಕನಿಗೆ ಗಂಭೀರ ಗಾಯ
Update: 2018-04-12 12:23 GMT
ಸಾಗರ, ಎ.12: ಬಲೂನಿಗೆ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ಯುವಕನೋರ್ವನ ಎರಡೂ ಕಾಲುಗಳಿಗೆ ಗಂಭೀರ ಗಾಯವಾದ ಘಟನೆ ಇಲ್ಲಿನ ಜೋಸೆಫ್ ನಗರದಲ್ಲಿರುವ ಸಂತ ಜೋಸೆಫ್ ಚರ್ಚ್ ಹಾಲ್ನಲ್ಲಿ ಗುರುವಾರ ನಡೆದಿದೆ.
ಗಾಯಾಳುವನ್ನು ಇಕ್ಬಾಲ್(30) ಎಂದು ಗುರುತಿಸಲಾಗಿದೆ. ಇಲ್ಲಿನ ಸಂತ ಜೋಸೆಫ್ ಚರ್ಚ್ ಹಾಲ್ನಲ್ಲಿ ಇಂದು ನಡೆಯಲಿದ್ದ ಮದುವೆ ಸಮಾರಂಭಕ್ಕೆ ಇಕ್ಬಾಲ್ ಡೆಕೋರೇಶನ್ ಮಾಡುತ್ತಿದ್ದರು. ಈ ಸಂದರ್ಭ ಅವರು ಮದುವೆ ಮಂಟಪದ ಮುಂಭಾಗದಲ್ಲಿ ಗ್ಯಾಸ್ ಸಿಲಿಂಡರ್ ಮೂಲಕ ಬಲೂನ್ ಊದುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇದ್ದಕ್ಕಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಇಕ್ಬಾಲ್ ಅವರ ಎರಡು ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.