​ಮಡಿಕೇರಿ: ರಜೆಯಲ್ಲಿ ಊರಿಗೆ ಬಂದ ಯೋಧ ದರೋಡೆಕೋರನಾಗಿ ಸೆರೆಯಾದ

Update: 2018-04-12 12:38 GMT

ಮಡಿಕೇರಿ, ಎ.12: ರಜೆಯಲ್ಲಿ ಊರಿಗೆ ಬಂದ ಯೋಧನೋರ್ವ ಮತ್ತೆ ಸೇನೆಗೆ ಹಿಂತಿರುಗದೆ ತನ್ನ ಸಹೋದರನೊಂದಿಗೆ ಸೇರಿ ದರೋಡೆ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದೀಗ ಯೋಧ ಮತ್ತು ಆತನ ಸಹೋದರ ಪೊಲೀಸರ ಅತಿಥಿಯಾಗಿದ್ದಾರೆ.

ಕುಶಾಲನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ತಡರಾತ್ರಿ ವೇಳೆ ಪ್ರಯಾಣಿಕರ ಚಿನ್ನಾಭರಣ ದೋಚುತ್ತಿದ್ದ ಚೋರರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕುಶಾಲನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಸಹೋದರರಾಗಿದ್ದು, ನಗದು ಸೇರಿದಂತೆ ಒಟ್ಟು ರೂ. 4,50,000 ಮೌಲ್ಯದ ಸೊತ್ತನ್ನು ವಶಪಡಿಸಿ ಕೊಂಡಿದ್ದಾರೆ. ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಲಕ್ಷ್ಮಣ ಎಂಬವರ ಇಬ್ಬರು ಪುತ್ರರಾದ ಎನ್.ಎಲ್. ನವೀನ್ (20) ಮತ್ತು ಸುಬ್ರಮಣಿ (25) ಬಂಧಿತ ಆರೋಪಿಗಳಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಇತ್ತೀಚೆಗೆ ಸಾರಿಗೆ ಬಸ್ ನಿಲ್ದಾಣದಲ್ಲಿ ತಡರಾತ್ರಿ ವೇಳೆ ಶೌಚಾಲಯಕ್ಕೆ ತೆರಳುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ ನಡೆಯುತ್ತಿದ್ದ ಸುಲಿಗೆ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನ ದೊಂದಿಗೆ ಡಿವೈಎಸ್ಪಿ ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿಗಳಾದ ಜಗದೀಶ್, ನವೀನ್‍ಗೌಡ ಮತ್ತು ಸಿಬ್ಬಂದಿಗಳ ತಂಡ ಪತ್ತೆ ಕಾರ್ಯ ಕೈಗೊಂಡಿದ್ದರು. ಬಂಧಿತರಿಂದ 3,90,000 ರೂ. ಮೌಲ್ಯದ 130 ಗ್ರಾಂ ಚಿನ್ನಾಭರಣ, 20,000 ಮೌಲ್ಯದ ಎರಡು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಬಂಧಿತರ ಪೈಕಿ ಸುಬ್ರಮಣಿ ಕಳೆದ 4 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ರಜೆಯಲ್ಲಿ ಆಗಮಿಸಿದ ವ್ಯಕ್ತಿ ಮರಳಿ ಹಿಂದಿರುಗದೆ ಸುಲಿಗೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕುಶಾಲನಗರ ಮೂಲಕ ರಾತ್ರಿ ವೇಳೆ ನೂರಾರು ಸಾರಿಗೆ ಬಸ್‍ಗಳು ಓಡಾಡುತ್ತಿದ್ದು, ಮಹಿಳೆಯರು ಶೌಚಾಲಯಕ್ಕೆ ತೆರಳುವ ಸಮಯದಲ್ಲಿ ಹೊಂಚು ಹಾಕಿ ಆರೋಪಿ ಸಹೋದರರು ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ವಿಶೇಷ ಪೊಲೀಸ್ ಅಪರಾಧ ಪತ್ತೆ ತಂಡದ ಪಿ.ಬಿ. ಸುರೇಶ್, ಪಿ.ಎಂ. ಮುಸ್ತಾಫ, ಕೆ.ಎಸ್. ಸುಧೀಶ್‍ಕುಮಾರ್, ಉದಯಕುಮಾರ್, ಸಂಪತ್ ರೈ, ಸುಧೀಶ್‍ಕುಮಾರ್, ದಯಾನಂದ, ಜೋಸೆಫ್, ಲೋಕೇಶ್, ಚಾಲಕರಾದ ಪ್ರವೀಣ್, ಗಣೇಶ್, ಸೈಬರ್ ಕ್ರೈಂ ಸೆಲ್‍ನ ರಾಜೇಶ್, ಗಿರೀಶ್ ಮತ್ತಿತರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News