ಪಕ್ಕದ ಮನೆಯವನಿಂದ ಅತ್ಯಾಚಾರಕ್ಕೆ ಯತ್ನ: ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಆನೇಕಲ್,ಎ,17: ಅತ್ಯಾಚಾರ ಯತ್ನಕ್ಕೆ ನೊಂದು ಗೃಹಿಣಿಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಆನೇಕಲ್ ಪಟ್ಟಣದ 18ನೇ ವಾರ್ಡಿನ ವಿಶ್ವೇಶ್ವರಯ್ಯ ಬಡಾವಣೆಯ ಮನೆಯಲ್ಲಿ ಆತ್ಮಹತ್ಯೆ ಯತ್ನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೃಹಿಣಿ ಸುಜಾತಳ ಮೇಲೆ ಪಕ್ಕದ ಮನೆಯ ಶಾಮಯ್ಯನ ಮಗ ಹರೀಶ್ ಅತ್ಯಾಚಾರಕ್ಕೆ ಯತ್ನ ನಡೆಸಿದ್ದ ಎನ್ನಲಾಗಿದ್ದು, ಹೀಗಾಗಿ ಮನ ನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾಳೆಂದು ತಿಳಿದುಬಂದಿದೆ.
ವಿಷಯ ತಿಳಿದ ತಕ್ಷಣ ಕೆಲಸಕ್ಕೆಂದು ಹೊರಟಿದ್ದ ಗಂಡ ಚಿಕ್ಕಣ್ಣ ಮನೆಗೆ ಬಂದಿದ್ದು, ಆಗಲೇ ಇಬ್ಬರು ಮಕ್ಕಳು ಮನೆಗೆ ಆಗಮಿಸಿ ಸುಜಾತಳನ್ನು ಕಾಪಾಡಿದ್ದಾರೆ. ಗಂಡ ಚಿಕ್ಕಣ್ಣ ಮತ್ತು ಒಂದು ಮಗುವಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದು, ಸುಜಾತ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.
ಕೂಡಲೆ ಸ್ಥಳಕ್ಕೆ ದಾವಿಸಿದ ಆನೇಕಲ್ ಸಿಐ ಮೋಹನ್, ಎಸೈ ಹೇಮಂತ್ಕುಮಾರ್, ಎಸೈ ಜಗದೀಶ್ ಪರಿಶೀಲನೆ ನಡೆಸಿ ಶಾಮಯ್ಯನ ಮಗನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.