“ಅನಂತ್ ಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಟ್ರಕ್ ಢಿಕ್ಕಿ ಆಕಸ್ಮಿಕ”
Update: 2018-04-18 07:00 GMT
ರಾಣಿಬೆನ್ನೂರು, ಎ.18: “ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಬೆಂಗಾವಲು ವಾಹನಕ್ಕೆ ಟ್ರಕ್ ಒಂದು ಢಿಕ್ಕಿ ಹೊಡೆದ ಪ್ರಕರಣದಲ್ಲಿ ಯಾವುದೇ ಹುನ್ನಾರಗಳಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರ ಬೆಂಗಾವಲು ಪಡೆಯ ವಾಹನವೊಂದಕ್ಕೆ ಟ್ರಕ್ ಒಂದು ಢಕ್ಕಿ ಹೊಡೆದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿತ್ತು. ತನ್ನನ್ನು ಹತ್ಯೆಗೈಯಲು ನಡೆದ ಸಂಚು ಇದು ಎಂದು ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದರು.
“ಈ ಟ್ರಕ್ ನನ್ನ ಕಾರನ್ನು ಗುರಿಯಾಗಿಸಿತ್ತಾದರೂ ಅದು ಹಾಗೆ ಮಾಡುವಲ್ಲಿ ಯಶಸ್ವಿಯಾಗಿರಲಿಲ್ಲ'' ಎಂದು ಅವರು ಆರೋಪಿಸಿದ್ದರು. ಆದರೆ ಲಾರಿ ಚಾಲಕ ಏಕಾಏಕಿ ತಿರುವು ತೆಗೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪರಶುರಾಂ ತಿಳಿಸಿದ್ದಾರೆ.