ಚೆನ್ನೈ: ಬಿಜೆಪಿ ಮುಖಂಡನಿಂದ 9ರ ಬಾಲೆಗೆ ಲೈಂಗಿಕ ಕಿರುಕುಳ

Update: 2018-04-23 03:56 GMT
ಕೆ.ಪಿ.ಪ್ರೇಮ್ ಅನಂತ್

ಚೆನ್ನೈ, ಎ. 23: ಚಲಿಸುತ್ತಿದ್ದ ರೈಲಿನಲ್ಲಿ ಒಂಬತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಿಜೆಪಿ ಮುಖಂಡನೊಬ್ಬರನ್ನು ಬಂಧಿಸಲಾಗಿದೆ.

ವೃತ್ತಿಯಲ್ಲಿ ವಕೀಲನಾಗಿರುವ ಈತ 2006ರ ಚುನಾವಣೆಯಲ್ಲಿ ಪ್ರತಿಷ್ಠಿತ ಆರ್.ಕೆ.ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ.

ತಿರುವನಂತಪುರಂನಿಂದ ಚೆನ್ನೈಗೆ ಬರುವ ತ್ರಿವೆಂಡ್ರಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಕುಟುಂಬದ ಜತೆ ಪ್ರಯಾಣಿಸುತ್ತಿದ್ದ ಬಾಲಕಿ ಮಧ್ಯದ ಬರ್ತ್‌ನಲ್ಲಿ ನಿದ್ರಿಸುತ್ತಿದ್ದಳು. ಆಕೆಯ ಮೇಲೆ ಕೆ.ಪಿ.ಪ್ರೇಮ್ ಅನಂತ್ ಲೈಂಗಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಸೇಲಂ ಮತ್ತು ಈರೋಡ್ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಬಾಲಕಿ ಕೂಗಿಕೊಂಡಾಗ ತಕ್ಷಣ ಪೋಷಕರು ಈತನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಯಿತು. "ಈತ ನನ್ನ ಎದೆ ಮೇಲೆ ಕೈಯಾಡಿಸುತ್ತಿದ್ದ ಎಂದು ಬಾಲಕಿ ಹೇಳಿದ್ದಾಳೆ" ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಲೈಂಗಿಕ ಶೋಷಣೆ ಮಾಡುವವರಿಗೆ ಮರಣ ದಂಡನೆ ವಿಧಿಸುವುದೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ರಾಷ್ಟ್ರಪತಿ ಸುಗ್ರೀವಾಜ್ಞೆ ಜಾರಿಗೊಳಿಸಿದ ದಿನವೇ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News