ದೇವೇಗೌಡ, ಕುಮಾರಸ್ವಾಮಿ ನಿಜವಾದ ರೈತ ನಾಯಕರು: ಅನಿತಾ ಕುಮಾರಸ್ವಾಮಿ

Update: 2018-04-23 16:29 GMT

ಮಂಡ್ಯ, ಎ.23: ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿ.ಎಸ್.ಪುಟ್ಟರಾಜು ನಿಜವಾದ ರೈತ ನಾಯಕರು ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ಪಾಂಡವಪುರದಲ್ಲಿ ಸೋಮವಾರ ನಡೆದ ಜೆಡಿಎಸ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್‍ಗೆ ಮತ ಹಾಕುವಂತೆ ಮನವಿ ಮಾಡಿದರು. ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಂತೆಯೇ ಸಿ.ಎಸ್.ಪುಟ್ಟರಾಜು ಕೂಡ ಕ್ಷೇತ್ರದ ಸರ್ವಜನಾಂಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಜವಾದ ರೈತನಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ದೇವೇಗೌಡರು ಮಂಡ್ಯ ಜಿಲ್ಲೆಯಲ್ಲಿ ಹುಟ್ಟದಿದ್ದರೂ ಜಿಲ್ಲೆಯ ಜನತೆ ಅಪಾರ ಪ್ರೀತಿ ತೋರುತ್ತಿದ್ದಾರೆ. ಇದಕ್ಕೆ ನಮ್ಮ ಕುಟುಂಬ ಅಭಾರಿಯಾಗಿದೆ ಎಂದು ಅವರು ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರು ಪಟ್ಟಣದಲ್ಲಿನ ಒಳಚರಂಡಿ ವಿಚಾರವಾಗಿ ಮಾಡಿದ ಎಡವಟ್ಟಿನಿಂದ ಇಂದು ಪಟ್ಟಣ ಗಬ್ಬು ನಾರುತ್ತಿದೆ. ಪಿಎಸ್‍ಎಸ್‍ಕೆ ಸ್ಥಗಿತಕ್ಕೆ ಕೆ.ಎಸ್.ಪುಟ್ಟಣ್ಣಯ್ಯ ಅವರೇ ಕಾರಣ ಎಂದು ಆರೋಪಿಸಿದರು.

ಐಸಿಸಿ ಸಭೆಯ ತೀರ್ಮಾನದಂತೆ ಕೆಆರ್‍ಎಸ್ ಅಚ್ಚುಕಟ್ಟಿನ ಎಲ್ಲಾ ನಾಲೆಗಳಿಗೆ ತಕ್ಷಣವೇ ನೀರು ಹರಿಸಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಶಿವರಾಮೇಗೌಡ, ನಾಗಮ್ಮ ಪುಟ್ಟರಾಜು, ಲಕ್ಷ್ಮೀ ಅಶ್ವಿನ್‍ಗೌಡ, ಶಿವರಾಜು ಪುಟ್ಟರಾಜು, ಜಿಪಂ ಸದಸ್ಯ ಸಿ.ಅಶೋಕ್, ಸಾಮಿಲ್ ತಿಮ್ಮೇಗೌಡ, ಪುರಸಭೆ ಅಧ್ಯಕ್ಷೆ ತಾಯಮ್ಮ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News