ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧವನ್ನು ನಾವೆಂದೂ ಒಪ್ಪಿಕೊಂಡಿಲ್ಲ ಎಂದ ಸುಪ್ರೀಂ ಕೋರ್ಟ್

Update: 2018-04-23 17:35 GMT

ಹೊಸದಿಲ್ಲಿ,ಎ.23: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಸುದ್ದಿ ಜಾಲತಾಣ ‘ದಿ ವೈರ್’ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ರಾಜಿ ಸಂಧಾನದ ಸಾಧ್ಯತೆಯನ್ನು ಕಂಡುಕೊಳ್ಳುವಂತೆ ಸೋಮವಾರ ಉಭಯರಿಗೂ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು, ಈ ವಿಷಯದಲ್ಲಿ ಕ್ಷಮೆ ಕೋರುವಂತೆ ‘ದಿ ವೈರ್‌’ಗೆ ತಾನೆಂದೂ ಸೂಚಿಸಿರಲಿಲ್ಲ ಎಂದು ಸ್ಪಷ್ಟಪಡಿಸಿತು.

ಪ್ರಕರಣದ ಹಿಂದಿನ ವಿಚಾರಣೆಯ ದಿನ ನ್ಯಾಯಾಲಯದ ಹೊರಗೆ ತಾನು ‘ದಿ ವೈರ್’ ಪರ ನ್ಯಾಯವಾದಿ ನಿತ್ಯಾ ರಾಮಕೃಷ್ಣನ್ ಅವರನ್ನು ಮಾತನಾಡಿಸಿದಾಗ ‘ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ಎಂದು ಅವರು ಹೇಳಿದ್ದರು ಎಂದು ಶಾ ಪರ ವಕೀಲರು ತಿಳಿಸಿದ ಸಂದರ್ಭ ನ್ಯಾ.ಡಿ.ವೈ.ಚಂದ್ರಚೂಡ ಅವರು ಈ ಸ್ಪಷ್ಟನೆಯನ್ನು ನೀಡಿದರು.

ಶಾ ಪರ ವಕೀಲರ ಹೇಳಿಕೆಯನ್ನು ಸರಿಪಡಿಸಿದ ರಾಮಕೃಷ್ಣನ್,ಅವರು ಕ್ಷಮಾಯಾಚನೆಯನ್ನು ಬಯಸಿದ್ದು ಅದನ್ನೇ ತಾನು ತಿರಸ್ಕರಿಸಿದ್ದೆ ಎಂದು ಹೇಳಿದರು. ಕ್ಷಮಾಯಾಚನೆಯ ಪ್ರಶ್ನೆಯೇ ಇಲ್ಲ ಎಂದು ಅವರು ಒತ್ತಿ ಹೇಳಿದಾಗ, ತಾನೆಂದೂ ಕ್ಷಮೆ ಯಾಚಿಸುವಂತೆ ಸೂಚಿಸಿರಲಿಲ್ಲ. ಮಾಧ್ಯಮಗಳ ಸ್ವಾತಂತ್ರ್ಯವೂ ಮುಖ್ಯವಾದ ವಿಷಯವಾಗಿದೆ ಎಂದು ನ್ಯಾ.ಚಂದ್ರಚೂಡ ಹೇಳಿದರು. ಶಾ ಅವರ ಸ್ಪಷ್ಟನೆ ಅಥವಾ ಹೇಳಿಕೆಗನುಗುಣವಾಗಿ ತಾನು ಮಾತನಾಡುತ್ತಿದ್ದು,ಇದನ್ನು ದಿ ವೈರ್ ಪ್ರಕಟಿಸಬಹುದು ಎಂದರು.

ಶಾ ಅವರ ಉದ್ಯಮ ವ್ಯವಹಾರಗಳ ಕುರಿತು ‘ದಿ ವೈರ್’ 2017,ಅಕ್ಟೋಬರ್‌ನಲ್ಲಿ ವರದಿಯೊಂದನ್ನು ಪ್ರಕಟಿಸಿದ್ದು,ಇದಕ್ಕೆ ಸಂಬಂಧಿಸಿದಂತೆ ಗುಜರಾತ್ ಉಚ್ಚ ನ್ಯಾಯಾಲಯವು ಶಾ ಪರ ತಡೆಯಾಜ್ಞೆಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ‘ದಿ ವೈರ್’ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

 ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳನ್ನು ತಾನೆಂದೂ ಒಪ್ಪಿಕೊಂಡಿಲ್ಲ. ಐಪಿಸಿಯ ಕಲಂ 499(ಕ್ರಿಮಿನಲ್ ಮಾನಹಾನಿ)ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ತಾನು ತೀರ್ಪು ನೀಡಿದ್ದಿದೆಯಾದರೂ ಅಭಿವ್ಯಕ್ತಿ ಸ್ವಾತಂತ್ರ್ಯವು ಮುಖ್ಯವಾಗಿದೆ ಮತ್ತು ಕ್ರಿಮಿನಲ್ ಮಾನಹಾನಿ ಪ್ರಕರಣಗಳನ್ನು ಇತ್ಯರ್ಥ ಗೊಳಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News