ಹನೂರು: ಜೆಡಿಎಸ್ ಅಭ್ಯರ್ಥಿ ಮಂಜುನಾಥ್‌ರಿಂದ ಮತ ಯಾಚನೆ

Update: 2018-04-24 04:41 GMT

ಹನೂರು, ಎ.24: ಕ್ಷೇತ್ರದ ಸಮಗ್ರ ಅಭಿವೃದ್ದಿಗೆ, ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿ ಮತ್ತು ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ವಿಧಾನಸೌಧಕ್ಕೆ ಹನೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾದ ನನನ್ನು ಗೆಲ್ಲಿಸುವ ಮುಖಾಂತರ ಅವರ ಕೈಯನ್ನು ಮತ್ತಷ್ಟು ಬಲಪಡಿಸಿ ಎಂದು ಪಕ್ಷದ ಅಭ್ಯರ್ಥಿ ಮಂಜುನಾಥ್ ಮನವಿ ಮಾಡಿದ್ದಾರೆ.

 ಪಟ್ಟಣದ ಮುಖ್ಯ ರಸ್ತೆ, ವಿವಿಧ ಅಂಗಡಿ ಮುಂಗಟ್ಟುಗಳು ಹಾಗೂ ಬಸ್ ನಿಲ್ದಾಣದಲ್ಲಿ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಕಳೆದ 10 ವರ್ಷಗಳ ಆಡಳಿತಾವಧಿಯಲ್ಲಿ ಸ್ಥಳೀಯ ಶಾಸಕರ ನಿರ್ಲಕ್ಷದಿಂದ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಜತೆಗೆ ಜನತೆಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಕ್ಷೇತ್ರ ವ್ಯಾಪ್ತಿಯ ಕಾಡಂಚಿನ ಗ್ರಾಮದ ಜನರು ಉದ್ಯೋಗವನ್ನರಸಿ ಬೆಂಗಳೂರು, ಊಟಿ, ಕೊಡಗು ಹಾಗೂ ತಮಿಳುನಾಡು ಕಡೆಗಳಿಗೆ ಗುಳೆ ಹೋಗಿರುವುದು ಸ್ಥಳೀಯ ಶಾಸಕರ ಆಡಳಿತದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಈ ಕ್ಷೇತ್ರದ ಜನತೆ ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ನನಗೆ ಒಂದು ಅವಕಾಶ ಕೂಟ್ಟು ನೋಡಿ, ಹನೂರು ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನು ಮಾಡುತ್ತೇನೆ ಎಂದು ಮನವಿ ಮಾಡಿದರು.

ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಕಾಮರಾಜು, ವಕೀಲ ರುದ್ರಾರಾಧ್ಯ, ಪೂನ್ನಾಚ್ಚಿ ಮಹಾದೇವಸ್ವಾಮಿ, ಮುಖಂಡರಾದ ಹನೂರು ಮಂಜೇಶ್, ಮಂಗಳಾ ರಾಜಶೇಖರ್, ಮೂರ್ತಿ, ರವಿ, ಅಮಿನ್, ಸತೀಶ್ ಹಾಗೂ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News