'ರಾಹುಲ್ ಗಾಂಧಿ ಓರ್ವ ತಲೆತಿರುಕ' : ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ

Update: 2018-04-26 17:14 GMT

ರಾಹುಲ್ ಗಾಂಧಿ ಓರ್ವ ತಲೆತಿರುಕ : ಬಿ.ಎಸ್.ಯಡಿಯೂರಪ್ಪ 
ಶಿವಮೊಗ್ಗ, ಎ., 26: 'ಕಳಂಕಿತರನ್ನು ವಿಧಾನಸಭೆಗೆ ಕಳುಹಿಸುತ್ತಿರುವ ನರೇಂದ್ರ ಮೋದಿ' ಎಂದು ಟ್ವೀಟ್ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. 'ರಾಹುಲ್ ಗಾಂಧಿ ಓರ್ವ ತಲೆತಿರುಕ. ಆತನ ಹೇಳಿಕೆಗೆ ಒತ್ತು ನೀಡುವ ಅಗತ್ಯವಿಲ್ಲ' ಎಂದು ವಾಕ್‍ ಪ್ರಹಾರ ನಡೆಸಿದ್ದಾರೆ. 

ಶಿವಮೊಗ್ಗ ನಗರದಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಹುಲ್ ಗಾಂಧಿಗೆ ಯಾರ ಬಗ್ಗೆ ಹೇಗೆ ಮಾತನಾಡಬೇಕೆಂಬ ಕನಿಷ್ಠ ರಾಜಕೀಯ ಪರಿಜ್ಞಾನವೂ ಅವರಿಗಿಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯ ಹಾಳು ಮಾಡಿದವರನ್ನು ತನ್ನ ಸುತ್ತಮುತ್ತವಿಟ್ಟುಕೊಂಡು ರಾಜ್ಯ ಸುತ್ತಾಡುತ್ತಿರುವ ರಾಹುಲ್ ಗಾಂಧಿ, ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅವರು ಮೊದಲು ರಾಜ್ಯದ ಜನತೆಗೆ ಉತ್ತರಿಸಲಿ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್‍ನಿಂದ ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿರುವುದು ರಾಹುಲ್ ಗಾಂಧಿಗೆ ತಿಳಿದಿಲ್ಲವೆ? ಹಗಲು ದರೋಡೆಗೆ ಕಡಿವಾಣ ಹಾಕುವುದು ಬಿಟ್ಟು, ಬಿಜೆಪಿ ಪಕ್ಷದ ಕುರಿತಂತೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ 224 ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳೊಂದಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ಅಭ್ಯರ್ಥಿಗಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ಉಂಟು ಮಾಡಿದೆ ಎಂದು ಇದೇ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News