ಮಾರಣಾಂತಿಕ ಹಲ್ಲೆ:4 ಮಂದಿ ಆರೋಪಿಗಳ ಬಂಧನ

Update: 2018-04-26 18:10 GMT

ಕೆ.ಆರ್.ಪೇಟೆ,ಎ.26: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪಟ್ಟಣದ ಸುಭಾಷ್‍ನಗರದಲ್ಲಿ ಹಾಡುಹಗಲೇ ವರ್ತಕನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ನಾಲ್ವರು ಕಿಡಿಗೇಡಿಗಳನ್ನು ಪಟ್ಟಣ ಪೋಲಿಸರು ಬಂಧಿಸಿ, ಎರಡು ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಗಳಾದ ಅನಂತಕುಮಾರ ಅಲಿಯಾಸ್ ಚೈಲ್ಡ್, ಸಲ್ಮಾನ್‍ಖಾನ್ ಅಲಿಯಾಸ್ ಸಲ್ಲೂ, ದೇವರಾಜ ಅಲಿಯಾಸ್ ಬೆಣ್ಣೆ ಮತ್ತು ಮದ್ದೂರು ತಾಲೂಕು ದೊಡ್ಡರಸಿನಕೆರೆಯ ವಿನಯಕುಮಾರ್ ಅಲಿಯಾಸ್ ವಿನಯನ್ ಬಂಧಿತರು.
ಬಂಧಿತರು ಕಳೆದ ಎ.9ರಂದು ಮಧ್ಯಾಹ್ನ ಪಟ್ಟಣದ ಸುಭಾಷ್‍ನಗರದಲ್ಲಿ ವರ್ತಕ ಫುಕ್‍ರಾಜ್ ಅಂಡ್ ಕಂಪನಿಯ ಮಾಲಕ ಗೋಪಾಲ್‍ಸಿಂಗ್(32) ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಾಕು ಮತ್ತು ಡ್ರ್ಯಾಗನ್‍ನಿಂದ ಇರಿದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದರು.

ಪಟ್ಟಣದ ಸರ್ಕಲ್ ಇನ್ಸ್‍ಪೆಕ್ಟರ್ ಕಛೇರಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ರಾಧಿಕ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಾಗಮಂಗಲ ಡಿವೈಎಸ್‍ಪಿ ಮುದವಿ, ಸರ್ಕಲ್ ಇನ್ಸ್‍ಪೆಕ್ಟರ್ ಎಚ್.ಬಿ.ವೆಂಕಟೇಶಯ್ಯ, ಪಿಎಸ್‍ಐಗಳಾದ ಎಚ್.ಎಸ್.ವೆಂಕಟೇಶ್, ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News