ಪ್ರಧಾನಿ ಮೋದಿಗೆ ನೆನಪಿನ ಶಕ್ತಿ ಕಡಿಮೆ: ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್

Update: 2018-05-07 13:52 GMT

ಹುಬ್ಬಳ್ಳಿ, ಮೇ 7: ದಲಿತ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ತಮ್ಮದೇ ಸರಕಾರ ಎನ್ನುವ ಪ್ರಧಾನಿ ಮೋದಿಯವರಿಗೆ ನೆನಪಿನ ಶಕ್ತಿ ಕಡಿಮೆ ಇದ್ದಂತಿದೆ ಎಂದು ಟೀಕಿಸಿರುವ ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್, ದಲಿತ ಸಮುದಾಯದ ಕೆ.ಆರ್.ನಾರಾಯಣನ್ ಅವರು, ರಾಮನಾಥ ಕೋವಿಂದ್ ಅವರಿಗಿಂತ ಮೊದಲೇ ರಾಷ್ಟ್ರಪತಿಯಾಗಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿರಂತರವಾಗಿ ಇಷ್ಟೊಂದು ಸುಳ್ಳುಗಳನ್ನು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಕಾಂಗ್ರೆಸ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎಂದೂ ಅವಮಾನಿಸಿಲ್ಲ. ಜವಹರಲಾಲ್ ನೆಹರೂ, ಅಂಬೇಡ್ಕರ್ ಅವರನ್ನು ಮೊದಲ ಕಾನೂನು ಸಚಿವರನ್ನಾಗಿ ನೇಮಕ ಮಾಡಿದ್ದರು. ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಪ್ರಧಾನಿ ಮೋದಿ ಇಂಥ ಸುಳ್ಳುಗಳನ್ನು ಹೇಳುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದರು.

ಬಿಜೆಪಿ ಕೋಮು ಧ್ರುವೀಕರಣದ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಎಂಟು ಪ್ರಮುಖ ಧರ್ಮಗಳಿದ್ದು, ಆ ಧರ್ಮೀಯರ, ವಿವಿಧ ಜಾತಿಗಳ ಮಧ್ಯೆ ಸಹಬಾಳ್ವೆ ಮೂಡಿಸಬೇಕಾದುದು ಸರಕಾರಗಳ ಕರ್ತವ್ಯ. ಆದರೆ, ಅದನ್ನು ಬಿಟ್ಟು ಕೇಂದ್ರದ ಬಿಜೆಪಿ ಸರಕಾರ ಧರ್ಮಗಳ ಮಧ್ಯೆ ಒಡಕು ಮೂಡಿಸಲು ಯತ್ನಿಸುತ್ತಿದೆ ಎಂದು ದೂರಿದರು.

ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಯುವಲ್ಲಿ ಕೇಂದ್ರ ಸರಕಾರ ವಿಫಲವಾಗಿದ್ದು, ಕಠುವಾದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯಿಂದಾಗಿ ದೇಶದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಮೀರಾ ಕುಮಾರ್ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ. ಇಲ್ಲಿನ ಜನರು ಶಾಂತಿ ಪ್ರಿಯರು, ಕೋಮು ಸೌಹಾರ್ದತೆಗೆ ಹೆಸರಾದವರು. ಆದರೆ, ಪ್ರಧಾನಿ ಮೋದಿ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದರು.

ಧರ್ಮದ ವಿಭಜನೆ ಮಾಡಿಯೇ ಆಡಳಿತ ನಡೆಸುವ ಬಿಜೆಪಿಯನ್ನು ಶಾಂತಿ ಬಯಸುವ ಕರ್ನಾಟಕ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರಬಾರದು. ತಂದರೆ ನಿತ್ಯ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸಗಳು ನಡೆಯಲಿವೆ ಎಂದು ಮೀರಾ ಕುಮಾರ್ ಇದೇ ವೇಳೆ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News