ವಿಶ್ವಾಸಮತಯಾಚನೆ ಮಾಡದೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಪ್ರಜಾಪ್ರಭುತ್ವದ ಗೆಲುವು: ರಜಿನಿಕಾಂತ್
Update: 2018-05-20 09:16 GMT
ಚೆನ್ನೈ, ಮೇ 20: ವಿಶ್ವಾಸಮತಯಾಚಿಸದೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿ,ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿರುವುದು ಪ್ರಜಾಪ್ರಭುತ್ವದ ಗೆಲುವಾಗಿದ ಎಂದು ನಟ, ರಾಜಕಾರಣಿ ರಜಿನಿಕಾಂತ್ ಹೇಳಿದರು.
“ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿದ ರಾಜ್ಯಪಾಲರ ಕ್ರಮ ಸರಿಯಲ್ಲ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ಗೆ ಹ್ಯಾಟ್ಸಾಫ್” ಎಂದವರು ಹೇಳಿದರು.
ರಜಿನಿ ಮಕ್ಕಳ್ ಮಂಡ್ರಂನ ಮಹಿಳಾ ವಿಭಾಗದ ಸದಸ್ಯರನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. “ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷವಾದರೂ ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕು” ಎಂದವರು ಹೇಳಿದರು;
“ಬಿಜೆಪಿಯು ಬಹುಮತ ಸಾಬೀತಿಗೆ ಕೆಲದಿನಗಳ ಕಾಲಾವಕಾಶ ಕೇಳಿದರೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನವಾಗಿದೆ” ಎಂದವರು ಇದೇ ಸಂದರ್ಭ ಹೇಳಿದರು.