ಖಾದರ್ ಗೆ ಸಿಗಲಿ ಮಹತ್ವದ ಸಚಿವ ಸ್ಥಾನ

Update: 2018-05-21 12:21 GMT

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ. ಈ ಆಗ್ರಹ ನ್ಯಾಯಯುತವಾಗಿದೆ. ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯಲ್ಲಿ ಸಮಪಾಲು ಸಿಗಬೇಕಾದರೆ ಅಲ್ಲಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲೇಬೇಕು. 

ಹಾಗೆಯೇ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಮುಖ ಪ್ರದೇಶ ಕರಾವಳಿ ಕರ್ನಾಟಕ. ಈಗ ಇಡೀ ಕರಾವಳಿ ಕರ್ನಾಟಕಕ್ಕೆ ಕಾಂಗ್ರೆಸ್ ನಿಂದ ಕೇವಲ ಮೂವರು ಶಾಸಕರಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಒಟ್ಟು 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಕೇವಲ ಒಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಹತ್ತು ಶಾಸಕರಿದ್ದ ಪ್ರದೇಶದಲ್ಲಿ ಕಾಂಗ್ರೆಸ್ ಪಾಲಿಗೆ ಇದು ಅತ್ಯಂತ ಶೋಚನೀಯ ಸ್ಥಿತಿಯಾಗಿದೆ.

ಹಿಂದುತ್ವ ಮತ್ತು ಮೋದಿ ಅಲೆ ಇದರ ಹಿಂದೆ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ಇದು ನಿಜ ಎಂದಾದರೆ ಈ ಎರಡೂ ಅಲೆಗಳ ವಿರುದ್ಧ ಈಜಿ ದೊಡ್ಡ ಬಹುಮತದಿಂದಲೇ ಆಯ್ಕೆಯಾದ ಈ ಎರಡು ಜಿಲ್ಲೆಗಳ ಏಕೈಕ ಶಾಸಕ ಯು.ಟಿ. ಖಾದರ್ ಇಲ್ಲಿ ಕಾಂಗ್ರೆಸ್ ಮಾನವನ್ನು ಉಳಿಸಿದ್ದಾರೆ. ಇದು ಸಣ್ಣ ಜಯವಲ್ಲ. 

ಎಲ್ಲ ಸವಾಲುಗಳನ್ನು ಎದುರಿಸಿ ಸತತ ನಾಲ್ಕನೇ ಬಾರಿ ಗೆದ್ದಿರುವ ಅವರಿಗೆ ಕಾಂಗ್ರೆಸ್ ತುಂಬು ಪ್ರೋತ್ಸಾಹ ನೀಡಬೇಕು. ಜೊತೆಗೆ ಇಲ್ಲಿ ಉತ್ಸಾಹ ಕಳೆದುಕೊಂಡಿರುವ ಕಾರ್ಯಕರ್ತರಿಗೆ ಚೈತನ್ಯ ತುಂಬಲು ಕಾಂಗ್ರೆಸ್ ಯು. ಟಿ. ಖಾದರ್ ಅವರಿಗೆ ಟಾಪ್ 5 ರಲ್ಲಿ ಒಂದು ಸಚಿವ ಸ್ಥಾನ ನೀಡಬೇಕು. ಕಳೆದ ಅವಧಿಯಲ್ಲಿ ಅರೋಗ್ಯ ಮತ್ತು ಆಹಾರ ಸಚಿವರಾಗಿ ತಮ್ಮ ದಕ್ಷತೆಯಿಂದ ಗಮನ ಸೆಳೆದಿರುವ ಖಾದರ್ ಯಾವುದೇ ಖಾತೆ ನಿರ್ವಹಿಸಬಲ್ಲ ಅನುಭವಿ ಹಾಗು ಚಾಣಾಕ್ಷ. 

ಎಲ್ಲ ಧರ್ಮೀಯರನ್ನು ಜೊತೆಗೆ ತೆಗೆದುಕೊಂಡು ಮುಂದೆ ಹೋಗುವ ಮನೋಭಾವ ಕೂಡ ಅವರ ಪ್ಲಸ್ ಪಾಯಿಂಟ್. ಚುನಾವಣೆಯಲ್ಲೂ ಅವರನ್ನು ಎಲ್ಲ ಧರ್ಮ, ಜಾತಿಗಳ ಜನರು ಬೆಂಬಲಿಸಿದ್ದಾರೆ. ಅದಕ್ಕಾಗಿ ಅರ್ಹವಾಗಿಯೇ ಅವರಿಗೆ ಯಾವುದೇ ಮಹತ್ವದ ಖಾತೆಯನ್ನು ನೀಡಬೇಕು. ಈಗ ಅದರ ಅಗತ್ಯ ಪಕ್ಷಕ್ಕೂ ಅತ್ಯಂತ ಹೆಚ್ಚಿದೆ. 

Writer - ವಿನೋದ್ ಸುವರ್ಣ, ಮಂಗಳೂರು

contributor

Editor - ವಿನೋದ್ ಸುವರ್ಣ, ಮಂಗಳೂರು

contributor

Similar News