ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ: ಬಿ.ಎಸ್ ಯಡಿಯೂರಪ್ಪ

Update: 2018-05-21 16:45 GMT

ಚನ್ನಗಿರಿ,ಮೇ.21: ಈ ಸರ್ಕಾರ ಎಷ್ಟು ದಿನ ಇರುತ್ತೋ ಅವರಿಗೆ ಗೊತ್ತಿಲ್ಲ. ಆದರೆ, ನನಗೆ ದೈವಬಲ, ಜನ ಬಲ ಇದೆ. ನಮ್ಮ ಪಕ್ಷ ಖಂಡಿತಾ ಅಧಿಕಾರಕ್ಕೆ  ಬರುತ್ತದೆ. ನಾನು ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಮತ್ತೆ ಪ್ರವಾಸ ಕೈಗೊಳ್ಳುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಲೂಕಿನ ಸಮೀಪವಿರುವ ಸಂತೆಬೆನ್ನೂರು ಗ್ರಾಮದಲ್ಲಿ ಬಿಎಸ್‍ವೈ ಅವರ ಅಭಿಮಾನಿ ಚನ್ನಬಸಪ್ಪ ಹೃದಾಯಘಾತದಿಂದ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ನಂತರ ಅವರು ಮಾತನಾಡಿದರು.

ನನಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದು ಸಂತೆಬೆನ್ನೂರು ಗ್ರಾಮದ ಪಕ್ಷದ ಮುಖಂಡ ಹಾಗೂ ನನ್ನ ಅಭಿಮಾನಿ ಹುಣಸೆಮರದ ಚನ್ನಬಸಪ್ಪ ಟಿವಿ ನೊಡುತ್ತಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೇ ರೀತಿ ನನಗೆ ಅಧಿಕಾರ ಸಿಗಲಿಲ್ಲವೆಂದು ರಾಜ್ಯದ ಜನತೆ ದುಖಃದಲ್ಲಿದ್ದಾರೆ. ಅಭಿಮಾನಿಗಳು ಕಾರ್ಯಕರ್ತರು ಆಫಾತಕ್ಕೆ ಒಳಗಾಗಬಾರದು. ಈ ಸರ್ಕಾರ ಎಷ್ಟು ದಿನ ಇರುತ್ತೋ ಎಂಬುದನ್ನು ಕಾದು ನೊಡೋಣ. ಮತ್ತೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಎರಡು ದಿನಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದೇನೆ. ರಾಜ್ಯದಲ್ಲಿ ಯಾವಾಗಲಾದರೂ ಚುನಾವಣೆ ನಡೆದರೂ ಬಿಜೆಪಿ ಪಕ್ಷ 150 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಕೊನೆಯುಸಿರು ಇರುವ ತನಕ ರಾಜ್ಯದ ಅಭಿವೃದ್ಧಿಗಾಗಿ ರಾಜಕೀಯದಲ್ಲಿ ಮುಂದುವರೆಯುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ನಿರಂತರವಾಗಿ ಶ್ರಮವಹಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸುತ್ತದೆ ಎಂದರು.  

ಮೃತನ ಕುಟುಂಬಸ್ಥರ ಜೊತೆ ತುಂಬಾ ಭಾವುಕರಾಗಿ ಮಾತನಾಡಿದ ಬಿಎಸ್‍ವೈ ಚನ್ನಬಸಪ್ಪ ಪತ್ನಿ ರತ್ನಮ್ಮ ಹಾಗೂ ಅವರ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಈ ಸಂದರ್ಭ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಪಂ ಸದಸ್ಯೆ ಮಂಜುಳ ಟಿವಿ ರಾಜು, ಮರುಳಪ್ಪ, ಟಿ.ವಿ. ರಾಜು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News