ಮೈಸೂರು: ಮೊಬೈಲ್ ಕದ್ದು ಪರಾರಿಯಾಗಿದ್ದ ಇಬ್ಬರ ಬಂಧನ

Update: 2018-06-06 15:31 GMT

ಮೈಸೂರು,ಜೂ.6: ಗ್ರಾಹಕರಿಗೆ ಪಾರ್ಸೆಲ್ ತಲುಪಿಸಲು ತೆರಳಿದ್ದ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ನಿಂದ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಇರ್ಫಾನ್(21), ಸುಹೈಲ್(22) ಎಂದು ಗುರುತಿಸಲಾಗಿದ್ದು, ಸುಹೈಲ್ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಸಾಲ ತೀರಿಸಲು ಸಾಧ್ಯವಾಗದೇ ಮೊಬೈಲ್ ಕದಿಯಲು ಯತ್ನಿಸಿದ್ದ ಎನ್ನಲಾಗಿದೆ.

ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ರಾಜೇಶ್ ಎಂಬಾತ ಶನಿವಾರ ಉದಯಗಿರಿ ನೆಹರೂ ಪಾರ್ಕ್ ಬಳಿ ಆಫ್ತಾಬ್ ಎಂಬವರಿಗೆ ಪಾರ್ಸೆಲ್ ನೀಡಲು ತೆರಳಿದ್ದರು. ಆಫ್ತಾಬ್ ಅವರಿಗೆ ಕರೆ ಮಾಡಿ ಪಾರ್ಸೆಲ್ ಕೊಳ್ಳಲು ತಿಳಿಸಿದ್ದು, ಆಫ್ತಾಬ್ ಸ್ವಲ್ಪ ಸಮಯದ ಬಳಿಕ ಬಂದು ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ಬಳಿಕ ಕರೆ ಮಾಡಿದಾಗ ಆಫ್ತಾಬ್ ನಾಳೆ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದರು.

ಈ ವೇಳೆ ರಾಜೇಶ್ ಬಳಿ ಬಂದ ಇಬ್ಬರು ವ್ಯಕ್ತಿಗಳು ರಾಜೇಶ್ ನನ್ನು ಪಾರ್ಕಿನೊಳಗೆ ಕರೆದೊಯ್ದು ಬಲವಂತವಾಗಿ 18 ಸಾವಿರ ರೂ.ಮೌಲ್ಯದ ಫೋನ್ ಕಸಿದುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದರು. ಈ ಕುರಿತು ರಾಜೇಶ್ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೊಬೈಲ್ ಫೋನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾವು ನಡೆಸಿದ ಕೃತ್ಯವನ್ನು ಬಾಯ್ಬಿಟ್ಟಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News