ಹೊನ್ನಾಳಿ: ನೇಣು ಬಿಗಿದು ರೈತ ಆತ್ಮಹತ್ಯೆ
Update: 2018-06-06 17:02 GMT
ಹೊನ್ನಾಳಿ,ಜೂ.06: ಸಾಲ ಬಾಧೆ, ಬೆಳೆ ಹಾನಿಯಿಂದ ಬಸವಳಿದಿದ್ದ ರೈತ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ಮಾಸಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮಾಸಡಿ ಗ್ರಾಮದ ರೈತ ಎ.ಕೆ. ಶೇಖರಪ್ಪ(50) ಆತ್ಮಹತ್ಯೆ ಮಾಡಿಕೊಂಡಿರುವ ರೈತ.
ರೈತ ಎ.ಕೆ. ಶೇಖರಪ್ಪ 2.17 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಮಳೆ ಕೊರತೆಯಿಂದ ಹಾಳಾಗಿತ್ತು. ಸತತ ಮೂರು ಹಂಗಾಮಿನ ಬೆಳೆಯೂ ನಾಶವಾಗುವ ಮೂಲಕ ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದರು. ವಿಎಸ್ಎಸ್ಎನ್ನಲ್ಲಿ 10 ಸಾವಿರ ರು.ಗಳಷ್ಟು ಬೆಳೆ ಸಾಲ ಮತ್ತು ಖಾಸಗಿಯಾಗಿ 3.50 ಲಕ್ಷ ರು.ಗಳಷ್ಟು ಸಾಲ ಮಾಡಿಕೊಂಡಿದ್ದರು. ಮೃತರಿಗೆ ಮೂವರು ಪುತ್ರಿಯರಿದ್ದಾರೆ. ಅಂತ್ಯಕ್ರಿಯೆ ಬುಧವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೊನ್ನಾಳಿ ಪಿಎಸ್ಐ ಎನ್.ಸಿ. ಕಾಡದೇವರ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.