ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಉಮರ್ ಖಾಲಿದ್ ಗೆ ಕೊಲೆ ಬೆದರಿಕೆ

Update: 2018-06-09 13:13 GMT

ಹೊಸದಿಲ್ಲಿ,ಜೂ.9: ಭೂಗತ ಪಾತಕಿ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿಯೋರ್ವನಿಂದ ತನಗೆ ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪಿಸಿ ಜೆಎನ್‌ಯು ವಿದ್ಯಾರ್ಥಿ ನಾಯಕ ಖಾಲಿದ್ ಉಮರ್ ಅವರು ಪೊಲೀಸ್ ದೂರನ್ನು ದಾಖಲಿಸಿದ್ದಾರೆ.

ರವಿ ಪೂಜಾರಿಯಿಂದ ತನಗೆ ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ದಲಿತ ನಾಯಕ ಹಾಗೂ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರೂ ಶುಕ್ರವಾರ ದೂರಿಕೊಂಡಿದ್ದರು.

ಖಾಲಿದ್ ಅವರು ಶುಕ್ರವಾರ ದೂರು ಸಲ್ಲಿಸಿದ್ದು,ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

‘‘ನನಗೆ ಮತ್ತು ಜಿಗ್ನೇಶ್‌ಗೆ ಪೂಜಾರಿಯಿಂದ ಕೊಲೆ ಬೆದರಿಕೆಗಳ ಬಗ್ಗೆ ದಿಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ನಾನು ತನ್ನ ಹಿಟ್ ಲಿಸ್ಟ್‌ನಲ್ಲಿದ್ದೇನೆ ಎಂದು ಆತ ಹೇಳಿದ್ದಾನೆ. ಈ ಹಿಂದೆ 2016,ಫೆಬ್ರವರಿಯಲ್ಲಿಯೂ ಇದೇ ವ್ಯಕ್ತಿ ನನಗೆ ಜೀವ ಬೆದರಿಕೆಯೊಡ್ಡಿದ್ದ. ನಾನು ಪೊಲೀಸ್ ರಕ್ಷಣೆಯನ್ನು ಕೇಳಿದ್ದೇನೆ’’ ಎಂದು ಖಾಲಿದ್ ಟ್ವೀಟಿಸಿದ್ದಾರೆ.

ತನ್ನ ಮಗ ದೇಶವನ್ನು ತೊರೆಯದಿದ್ದರೆ ಆತನನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿದೆ ಎಂದು ಆರೋಪಿಸಿ ಖಾಲಿದ್ ಅವರ ತಂದೆ ಸೈಯದ್ ಕಾಸಿಂ ಇಲ್ಯಾಸ್ ರಸೂಲ್ ಅವರು 2016ರಲ್ಲಿ ಪೊಲೀಸ್ ದೂರನ್ನು ದಾಖಲಿಸಿದ್ದರು.

ಸಂಸತ್ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದರ ವಿರುದ್ಧ ಕಾರ್ಯಕ್ರಮವೊಂದನ್ನು ಸಂಘಟಿಸಿದ್ದಕ್ಕಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ,ಅನಿರ್ಬಾನ ಭಟ್ಟಾಚಾರ್ಯ ಮತ್ತು ಖಾಲಿದ್ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಖಾಲಿದ್‌ಗಾಗಿ ಹುಡುಕಾಡುತ್ತಿದ್ದ ಸಂದರ್ಭಗಳಲ್ಲಿ ಅವರ ತಂದೆಗೆ ಈ ಬೆದರಿಕೆ ಕರೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News