ಬೈಕ್‌ಗಳ ನಡುವೆ ಢಿಕ್ಕಿ: ಇಬ್ಬರು ಸವಾರರು ಮೃತ್ಯು, ಇನ್ನಿಬ್ಬರಿಗೆ ಗಾಯ

Update: 2018-06-17 06:35 GMT

ದಾವಣಗೆರೆ, ಜೂ.17: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕೊಂದರ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ರಾತ್ರಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುರೇಮಾಕುಂಟೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೊಂದು ಬೈಕಿನಲ್ಲಿದ್ದ ಸವಾರರಿಬ್ಬರು ಗಾಯಗೊಂಡಿದ್ದಾರೆ.

ಚಟ್ನಳ್ಳಿ ನಿವಾಸಿ ಅನಿಲ್ ಕುಮಾರ್(22) ಹಾಗೂ ಮಾಚಿಹಳ್ಳ ತಾಂಡ ನಿವಾಸಿ ಸುನೀಲ್ ಕುಮಾರ್ ಮೃತಪಟ್ಟವರು. ಇವರಿಬ್ಬರು ಉಚ್ಚಂಗಿ ದುರ್ಗದಿಂದ ಹರಪನಹಳ್ಳಿ ಕಡೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಇವರಿದ್ದ ಬೈಕ್ ಮತ್ತು ಚಟ್ನಳ್ಳಿ ಕಡೆಯಿಂದ ಬರುತ್ತಿದ್ದ ಬೈಕ್ ಮುಖಾಮುಖಿ ಢಿಕ್ಕಿಯಾಗಿವೆ. ಈ ವೇಳೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಅನಿಲ್ ಮತ್ತು ಸುನೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಬೈಕಿನಲ್ಲಿದ್ದ ಇಬ್ಬರು ಸವಾರರು ಕೂಡ ಗಾಯಗೊಂಡಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಬಗ್ಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News