ಪತ್ರಕರ್ತ ಬುಖಾರಿ ಹತ್ಯೆ ತನಿಖೆಯಲ್ಲಿ ಯಾವುದೇ ಮುನ್ನಡೆ ಇಲ್ಲ
ಶ್ರೀನಗರ, ಜೂ. 17: ಕಾಶ್ಮೀರದ ಹಿರಿಯ ಪತ್ರಕರ್ತ ಶುಜಾತ ಬುಖಾರಿ ಅವರ ಹತ್ಯೆಗೆ ಸಂಬಂಧಿಸಿ ಬಂಧಿತನಾದ ಏಕೈಕ ವ್ಯಕ್ತಿ ಇದುವರೆಗೆ ಯಾವುದೇ ಸುಳಿವುಗಳನ್ನು ನೀಡಿಲ್ಲ. ಆದುದರಿಂದ ಆತ ಮೂವರು ಪ್ರಮುಖ ಶಂಕಿತರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಗುರುವಾರ ಸಂಜೆ ಕಚೇರಿಯಿಂದ ಕಾರಿನಲ್ಲಿ ತೆರಳಿದ ಬಳಿಕ ಬುಖಾರಿ ಅವರ ಮೇಲೆ ಬೈಕ್ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಬಗ್ಗೆ ಯಾವುದೇ ಸುಳಿವುಗಳನ್ನು ಬಂಧಿತ ಝುಬೈರ್ ಖಾದ್ರಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂವರು ಪ್ರಮಖ ಶಂಕಿತರೊಂದಿಗೆ ಖಾದ್ರಿಗೆ ಸಂಪರ್ಕ ಇಲ್ಲದೇ ಇರಬಹುದು ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುಷ್ಕರ್ಮಿಗಳು ತಮ್ಮ ಗುರುತು ಮರೆ ಮಾಚಲು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿ ರುವಂತೆ ಕಾಣುತ್ತದೆ ಎಂದು ಅವರು ತಿಳಿಸಿದ್ದಾರೆ. ಬುಖಾರಿ ಅವರ ಹಂತಕರನ್ನು ಪತ್ತೆ ಹಚ್ಚಲು ರೂಪಿಸಲಾಗಿದ್ದ ವಿಶೇಷ ತನಿಖಾ ತಂಡ ಶನಿವಾರ ಮೊದಲ ಸಭೆ ನಡೆಸಿತು. ಸಿಟ್ ಪ್ರಮುಖ ಸುಳಿವುಗಳನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಇನ್ನು ಮುಂದೆ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.