ದೇಶದ ವಿತ್ತ ಸಚಿವರು ಯಾರು?: ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ

Update: 2018-06-19 10:48 GMT

ಮುಂಬೈ, ಜೂ.19: ದೇಶದ ವಿತ್ತ ಸಚಿವರು ಯಾರು? ಎಂಬ ಪ್ರಶ್ನೆಯನ್ನು  ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಕೇಳಿದೆ. "ಪ್ರಧಾನಿ ಕಾರ್ಯಾಲಯದ ವೆಬ್ ಸೈಟ್  ಹಾಗೂ ವಿತ್ತ ಸಚಿವಾಲಯದ ವೆಬ್ ಸೈಟ್ ಬೇರೆಯೇ ಕಥೆಯನ್ನು ಹೇಳುತ್ತಿದೆ. ತರುವಾಯ ಪಿಎಂಒ ವೆಬ್ ಸೈಟ್ ನಲ್ಲಿ ಯಾವುದೇ ಖಾತೆ ಹೊಂದಿರದ ವ್ಯಕ್ತಿಯೊಬ್ಬರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸುತ್ತಿದ್ದಾರೆ. ದೇಶದ ವಿತ್ತ ಸಚಿವರು ಯಾರೆಂದು ಪ್ರಧಾನಿಯೇ ಹೇಳಬೇಕು'' ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.

ಪಿಎಂಒ ವೆಬ್‍ಸೈಟ್ ಅರುಣ್ ಜೇಟ್ಲಿ ಅವರನ್ನು `ಖಾತೆ ಇಲ್ಲದ ಸಚಿವರು' ಎಂದಿದ್ದರೆ, ವಿತ್ತ ಸಚಿವಾಲಯದ ವೆಬ್ ಸೈಟ್ ನಲ್ಲಿ  ಅವರನ್ನು ವಿತ್ತ ಸಚಿವರೆಂದು ಹೆಸರಿಸಲಾಗಿದೆ. ಪಿಎಂಒ ವೆಬ್ ಸೈಟ್ ನಲ್ಲಿ ಪಿಯುಷ್ ಗೋಯೆಲ್ ಅವರನ್ನು ವಿತ್ತ ಸಚಿವರೆಂದು ನಮೂದಿಸಲಾಗಿದೆ.

ಜೇಟ್ಲಿ ಅವರು ಕಿಡ್ನಿ ಕಸಿ ಶಸ್ತ್ರಕ್ರಿಯೆಗೊಳಗಾದ ನಂತರ ಗೋಯೆಲ್ ಅವರಿಗೆ ವಿತ್ತ ಸಚಿವಾಲಯದ ಕಾರ್ಯಭಾರ ವಹಿಸಲಾಗಿತ್ತು. ಆದರೆ ಕಳೆದೊಂದು ವಾರದಿಂದ ಜೇಟ್ಲಿ ಫೇಸ್ ಬುಕ್ ನಲ್ಲಿ ಹಲವು ಪೋಸ್ಟ್ ಗಳನ್ನು ಮಾಡಿ ಭಾರತದ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರಲ್ಲದೆ, ಕಾಂಗ್ರೆಸ್ ಪಕ್ಷವನ್ನು  ಕಟುವಾಗಿ ಟೀಕಿಸಿದ್ದಾರೆ.  ಕಾಂಗ್ರೆಸ್ ಕೂಡ ``ಖಾತೆ ಇಲ್ಲದ ಸಚಿವ'' ಎಂದು ಅವರನ್ನು ಅಣಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News