ಎಲ್ಲದಕ್ಕೂ ಉತ್ತರ ಸಿಗಲು ಶುಭ ಗಳಿಗೆಗಾಗಿ ಕಾಯಬೇಕು: ಸಚಿವ ಡಿಕೆಶಿ

Update: 2018-06-21 12:56 GMT

ಬೆಂಗಳೂರು, ಜೂ. 21: ‘ಯಾರ್ಯಾರ ವ್ಯವಹಾರ ಎಲ್ಲೆಲ್ಲಿದೆ? ಯಾವ ಉದ್ಯಮಿ, ಯಾವ ಹೊಟೇಲ್ ಮಾಲಕ ಎಲ್ಲವೂ ನನಗೆ ಗೊತ್ತು. ಎಲ್ಲವನ್ನು ಹೇಳುತ್ತೇನೆ, ಅದಕ್ಕೂ ಶುಭ ಮುಹೂರ್ತ ಬರಲಿ’ ಎಂದು ಸಚಿವ ಡಿ.ಕೆ.ಶಿವಕುಮಾರ್, ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಈವರೆಗೂ ಯಾವುದೇ ಕೋರ್ಟಿನ ಸಮನ್ಸ್ ಬಂದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗೂ ನನಗೂ ಯಾವುದೇ ಸಂಬಂಧವಿಲ್ಲ. ಎಲ್ಲಿ ಯಾರ ದುಡ್ಡು ಸಿಕ್ಕಿದ್ಯೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಹೊಸದಿಲ್ಲಿಯಲ್ಲಿ ನನ್ನದು ಡಬಲ್ ಬೆಡ್ ರೂಂನ ಒಂದು ಸಣ್ಣ ಫ್ಲ್ಯಾಟ್ ಇದೆ. ಈಗ ಇನ್ನೊಂದು ಫ್ಲಾಟ್ ಖರೀದಿಸಿದ್ದೇನೆ. ಇದೀಗ ಅದರ ನವೀಕರಣ ಕಾರ್ಯ ನಡೆಯುತ್ತಿದೆ. ಆ ಎರಡು ಫ್ಲಾಟ್ ಬಿಟ್ಟರೆ ಫ್ಲಾಟ್, ದುಡ್ಡು ಯಾವುದೂ ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ಕೆಲ ಸುದ್ದಿವಾಹಿನಿಗಳಲ್ಲಿ ಕಾರಾಗೃಹ, ಕಂಬಿ ಎಲ್ಲ ಚಿತ್ರ ಹಾಕಿ ತೋರಿಸುತ್ತಿದ್ದೀರಾ? ನಿಮಗೆ ಅದರಿಂದ ಖುಷಿ ಆಗಿದ್ದರೆ, ಖುಷಿಯಾಗಿರಿ. ಜನರನ್ನ ಖುಷಿ ಪಡಿಸುವ ಕೆಲಸ ನಿಮ್ಮದು ಅದನ್ನು ನೀವು ಮಾಡಿ ಎಂದು ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ದೂರಿನ ಪ್ರತಿ ಸಿಕ್ಕಿಲ್ಲ. ನನಗೆ ಯಾವುದೇ ಕೋರ್ಟ್ ಸಮನ್ಸ್ ಬಂದಿಲ್ಲ. ಆ ಎರಡೂ ಪ್ರತಿಗಳು ಸಿಕ್ಕ ಬಳಿಕ ನನ್ನ ವಕೀಲರು ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆ ಎಂದ ಅವರು, ನಾನು ಸೂಕ್ತ ಸಮಯದಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಆ ಶುಭ ಗಳಿಗೆಗಾಗಿ ಕಾಯಬೇಕು ಎಂದು ಅವರು ಹೇಳಿದರು.

ಶೋಭಾಗೆ ತಿರುಗೇಟು: ನಾನು ಇದೀಗ ಯಾರೊಬ್ಬರ ಬಗ್ಗೆಯೂ ಮಾತನಾಡುವುದಿಲ್ಲ. ಎಲ್ಲದಕ್ಕೂ ಒಂದು ಸಮಯ ಬರುತ್ತದೆ. ಆಗ ನಾನು ಉತ್ತರ ನೀಡುವೆ. ಕಾನೂನಿನ ಅನ್ವಯ ತನಿಖೆ ನಡೆಯಲಿ. ನ್ಯಾಯದ ವಿಶ್ವಾಸ ನನಗಿದೆ ಎಂದು ಉಪ್ಪು ತಿಂದವರು ನೀರು ಕುಡಿಯುತ್ತಾರೆಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News