ಮಡಿಕೇರಿ: ದುಬಾರೆ ಸರಕಾರಿ ಶಾಲೆಯೊಳಗೊಂದು ಗೋಳಿನ ಕಥೆ; ಅರಣ್ಯ ರೋಧನವಾದ ಗುರು, ಶಿಷ್ಯರ ಅಸಹಾಯಕ ಸ್ಥಿತಿ

Update: 2018-06-23 18:01 GMT

ಮಡಿಕೇರಿ, ಜೂ.23: ದುಬಾರೆ ಸಾಕಾನೆ ಶಿಬಿರದೊಳಗೆ ಇರುವ ಪುಟ್ಟ ಸರಕಾರಿ ಶಾಲೆಯ ಗುರು, ಶಿಷ್ಯರ ಸ್ಥಿತಿಗತಿ ಅಸಹಾಯಕವಾಗಿದೆ. ಒಂದರಿಂದ ಐದನೇ ತರಗತಿವರೆಗೆ ಇಲ್ಲಿ ಇಬ್ಬರೇ ಶಿಕ್ಷಕರು. ಗಿರಿಜನ ಹಾಡಿಯ ಜೇನು ಕುರುಬ ಜನಾಂಗದ ಮಕ್ಕಳಿಗಾಗಿಯೇ ಇರುವ ಶಾಲೆಯಲ್ಲಿ ಬಿಸಿಯೂಟ, ಹಾಲು, ಸಮವಸ್ತ್ರ, ಪುಸ್ತಕಗಳೆಲ್ಲವೂ ದೊರೆಯುತ್ತದೆ. ಉಚಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಕಲಿಕೆಗೂ ಉತ್ತಮ ವಾತಾವರಣವಿದೆ. ಆದರೆ ಆದಿವಾಸಿಗಳ ಮಕ್ಕಳಿಗೇ ಈ ಶಾಲೆ ಬೇಡವಾಗಿದೆ.

ದುಬಾರೆಯ ಸಾಕಾನೆ ಶಿಬಿರದ ಮೂಲೆಯಲ್ಲಿರುವ ಮೂರು ಕೊಠಡಿಗಳ ಈ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ 5, ಎರಡರಲ್ಲಿ 7, ಮೂರರಲ್ಲಿ 6 ನಾಲ್ಕರಲ್ಲಿ 4, ಹಾಗೂ ಐದನೇ ತರಗತಿಯಲ್ಲಿ 5 ಹೀಗೆ ಒಟ್ಟು 27 ವಿದ್ಯಾರ್ಥಿಗಳಿದ್ದಾರೆ. 1 ರಿಂದ 3 ನೇ ತರಗತಿ ಒಂದು ಕೋಣೆಯಲ್ಲಿ, 4 ಮತ್ತು 5 ನೇ ತರಗತಿ ಮತ್ತೊಂದು ಕೋಣೆಯಲ್ಲಿ ನಡೆಯುತ್ತದೆ. ಎಲ್ಲಾ ತರಗತಿಗಳನ್ನು ಇಬ್ಬರು ಶಿಕ್ಷಕರೇ ನಿಭಾಯಿಸಬೇಕು.

ಶಾಲೆಗೆ ಚಕ್ಕರ್
ಜೇನು ಕುರುಬ ಜನಾಂಗದ ಮಾವುತರ, ಕಾವಾಡಿಗಳ ಹಾಗೂ ಸಿಬ್ಬಂದಿಗಳ ಮಕ್ಕಳೆಲ್ಲರೂ ಹುಟ್ಟಿನಿಂದಲೇ ದುಬಾರೆ ಕಾಡಿನಲ್ಲಿ ಓಡಾಡಿದವರು, ಹೊಳೆಯ ನೀರಿನಲ್ಲಿ ಮುಳುಗೆದ್ದವರು, ಆನೆಗಳೊಂದಿಗೆ ಒಡನಾಟ  ಹೊಂದಿರುವವರು, ಮಳೆ, ಗಾಳಿ ಬಿಸಿಲೆನ್ನದೆ ಹೊರ ಆವರಣದಲ್ಲೇ ತಮ್ಮ ಕಾಲವನ್ನು ಕಳೆದವರು. ಇದೇ ಕಾರಣಕ್ಕೆ ತರಗತಿಗಳೆನ್ನುವ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಕೇಳುವ ಪರಿಸ್ಥಿತಿಯಲ್ಲಿ ಕಾಡಿನ ಮಕ್ಕಳಿಲ್ಲ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರುವ ಶಿಕ್ಷಕರ ಪ್ರಯತ್ನ ಸಂಪೂರ್ಣವಾಗಿ ವಿಫಲವಾಗುತ್ತಿದ್ದು, ಮಕ್ಕಳು ಹಾಡಿಯ ಅಂಗಳದಿಂದ, ಕಾಡಿನ ಮರೆಯಿಂದ ತರಗತಿಗಳಿಗೆ ಬರಲು ಮನಸ್ಸು ಮಾಡುತ್ತಿಲ್ಲ.

ಮರಳಿ ಶಾಲೆಗೆ ಬನ್ನಿ ಎಂಬ ಶಿಕ್ಷಣ ಇಲಾಖೆಯ ಕಾರ್ಯಕ್ರಮದಂತೆ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ಶಿಕ್ಷಕರು ಮಕ್ಕಳ ಮನವೊಲಿಸಿ ಕೆಲವರನ್ನು ತರಗತಿಗೆ ಕರೆ ತರುವ ಪ್ರಯತ್ನ ಮಾಡಿದ್ದಾರೆ. ಓದಲು, ಬರೆಯಲು ಹೇಳಿಕೊಡುವ ಸಂದರ್ಭ ನಿರಾಸಕ್ತರಾಗುವ ವಿದ್ಯಾರ್ಥಿಗಳು ಹಾಡಿಗಳಿಗೆ ತೆರಳಿ ಶಿಕ್ಷಕರು ಬೈಯುತ್ತಾರೆ, ಹೊಡೆಯುತ್ತಾರೆ ಎನ್ನುವ ಕಾರಣಗಳನ್ನು ನೀಡಿ ತರಗತಿಗಳಿಂದ ಹೊರಗುಳಿಯುತ್ತಿದ್ದಾರೆ. ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಸೇರಿಸಲು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಶಿಕ್ಷಕರು ಅಸಹಾಯಕರಾಗಿದ್ದಾರೆ. 

ಮಕ್ಕಳನ್ನು ಶಾಲೆಗೆ ಸೇರಿಸಲು ಆಧಾರ್ ಕಾರ್ಡಿಲ್ಲ, ಬ್ಯಾಂಕ್‍ಖಾತೆಯಿಲ್ಲ, ಫೋಟೋ ಇಲ್ಲ, ಸಮವಸ್ತ್ರದ ಮಹತ್ವ ತಿಳಿದಿಲ್ಲ. ಶಾಲೆಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಅನಕ್ಷರಸ್ಥ ಪೋಷಕರಿಗೆ ಜವಬ್ದಾರಿ ನೀಡದೆ ಸ್ವತ: ಶಿಕ್ಷಕರೇ ದಾಖಲೆಗಳ ಕ್ರೋಢೀಕರಣ ಕಾರ್ಯವನ್ನು ಕೂಡ ಮಾಡುತ್ತಿದ್ದಾರೆ. ಆದರೆ ಶಿಕ್ಷಕರ ಪ್ರಯತ್ನಗಳೆಲ್ಲವೂ ನಿಷ್ಪ್ರಯೋಜಕವಾಗುತ್ತಿದೆ. ಶಿಕ್ಷಕರು ಅಸಹಾಯಕ ಸ್ಥಿತಿಯಲ್ಲಿದ್ದು, ಕಾಡಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.

ಶಾಲಾ ಕಟ್ಟಡವೂ ಅನಾಥ
ಕೆಲವು ವರ್ಷಗಳ ಹಿಂದೆ ದುಬಾರೆ ಸಾಕಾನೆ ಶಿಬಿರದಲ್ಲಿ ಬಿದಿರಿನ ತಟ್ಟಿ ಹಾಗೂ ಗುಡಿಸಲಿನಲ್ಲಿ ಆರಂಭಗೊಂಡ ಸರಕಾರಿ ಶಾಲೆಗೆ ಇತ್ತೀಚೆಗೆ ಉತ್ತಮ ಕಟ್ಟಡವೂ ಲಭ್ಯವಾಗಿದೆ. ಆದರೆ ಸೂಕ್ತ ರೀತಿಯಲ್ಲಿ ಕಾಂಪೌಂಡ್ ನಿರ್ಮಾಣವಾಗದೆ ಜಾನುವಾರುಗಳ ಓಡಾಟದಿಂದಾಗಿ ಶಾಲಾ ವಠಾರ ಅಶುಚಿತ್ವದಿಂದ ಕೂಡಿರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಶಿಕ್ಷಕರೇ ಶಾಲಾ ಆವರಣವನ್ನು ಶುಚಿಗೊಳಿಸಬೇಕಾದ ದುರ್ಗತಿ ಬಂದೊದಗಿದೆ. ಪರಿಸರ ದಿನದಂದು ಮಕ್ಕಳು ಹಾಗೂ ಶಿಕ್ಷಕರು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ತೋರಿದರೂ ಕಾಡಾನೆಗಳು ಈ ಗಿಡಗಳನ್ನು ಧ್ವಂಸಗೊಳಿಸುತ್ತಿವೆ ಎನ್ನಲಾಗಿದೆ. 

ಶಿಕ್ಷಕರಿಯರಿಗೆ ಕಷ್ಟ
ಒಂದೆಡೆ ವಿದ್ಯಾರ್ಥಿಗಳು ಶಾಲೆಗೆ ಬಾರದೆ ಸತಾಯಿಸುತ್ತಿದ್ದರೆ ಮತ್ತೊಂದೆಡೆ ಇಬ್ಬರು ಮಹಿಳಾ ಶಿಕ್ಷಕಿಯರು ದುಬಾರೆ ಶಾಲೆಯನ್ನು ತಲುಪಲು ಬೋಟ್‍ ಅನ್ನೇ ಅವಲಂಭಿಸಬೇಕಾಗಿದೆ. ಮಹಾಮಳೆಯ ಸಂದರ್ಭ ತುಂಬಿ ಹರಿಯುವ ನದಿಯಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ತೆರಳಬೇಕಾದ ಆತಂಕದ ಪರಿಸ್ಥಿತಿಯನ್ನು ಶಿಕ್ಷಕಿಯರು ಎದುರಿಸುತ್ತಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟರೂ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ ಎನ್ನುವ ಬೇಸರ ಶಿಕ್ಷಕರಲ್ಲಿ ಮೂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News