ಶಿವಮೊಗ್ಗ: ರೌಡಿಶೀಟರ್ ಹತ್ಯೆ ಪ್ರಕರಣ; ಐವರು ಆರೋಪಿಗಳ ಬಂಧನ

Update: 2018-06-26 17:07 GMT

ಶಿವಮೊಗ್ಗ, ಜೂ. 26: ಇತ್ತೀಚೆಗೆ ಶಿವಮೊಗ್ಗ ನಗರದ ಹೊರವಲಯ ಸೂಳೇಬೈಲು ಬಡಾವಣೆಯಲ್ಲಿ ನಡೆದ ರೌಡಿ ಶೀಟರ್ ಹಬೀಬ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಂಗಾ ನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಸೂಳೇಬೈಲು ಬಡಾವಣೆಯ ನಿವಾಸಿಗಳಾದ ಕಲೀಂ(19), ಸಲೀಂ (20), ಶಾರು (19), ಸಯ್ಯದ್‍ಗೌಸ್ (20) ಹಾಗೂ ಯಾಸೀರ್ (21) ಆರೋಪಿಗಳೆಂದು ಗುರುತಿಸಲಾಗಿದೆ. ಮಂಗಳವಾರ ಎನ್.ಆರ್.ಪುರ ರಸ್ತೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಇನ್ಸ್ ಪೆಕ್ಟರ್ ಮಹಾಂತೇಶ್, ಸಬ್ ಇನ್ಸ್ ಪೆಕ್ಟರ್ ಗಿರೀಶ್ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬರ್ಬರ ಹತ್ಯೆ: ಕೊಲೆಗೀಡಾದ ಹಬೀಬ್‍ ಹಾಗೂ ಆರೋಪಿಗಳಿಗೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಈ ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಆರೋಪಿಗಳು ಕಳೆದ ಭಾನುವಾರ ಸೂಳೇಬೈಲು ಬಡಾವಣೆಯಲ್ಲಿಯೇ ಹಬೀಬ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಭೀಕರವಾಗಿ ಹತ್ಯೆ ನಡೆಸಿದ್ದರು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News