ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ಬಿಜೆಪಿ ನಾಯಕನಿಂದ ಗಂಭೀರ ಆರೋಪ

Update: 2018-06-30 13:14 GMT

ಬೆಂಗಳೂರು, ಜೂ.30: ಗರಿಷ್ಠ ಬೆಲೆಯ ನೋಟುಗಳ ಅಮಾನ್ಯೀಕರಣ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಶಾಸಕ ಭೈರತಿ ಬಸವರಾಜ್ ಸೇರಿ ಅನೇಕರು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸುಮಾರು 410 ಕೋಟಿ ರೂ.ಗಳಷ್ಟು ಹಣ ಪರಿವರ್ತಿಸಿಕೊಂಡಿದ್ದಾರೆಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಏಕಾಏಕಿ 500 ಮತ್ತು 1 ಸಾವಿರ ರೂ.ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಭೈರತಿ ಬಸವರಾಜ್ ಸೇರಿದಂತೆ ಇನ್ನಿತರರು ಬೆಂಗಳೂರು ಒನ್ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಸಿಎಂಎಸ್ ಕಂಪ್ಯೂಟರ್ಸ್ ಲಿಮಿಟೆಡ್‌ನ ಸಂಸ್ಥೆಯ ಮುಖ್ಯಸ್ಥರೊಂದಿಗೆ ಶಾಮೀಲಾಗಿ ಅಕ್ರಮವಾಗಿ ನೋಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಎಸ್‌ಎನ್‌ಎಲ್, ಬಿಡಿಎ, ಬಿಎಂಟಿಸಿ, ಕೆಎಸ್ಸಾರ್ಟಿಸಿ, ಕಂದಾಯ ಇಲಾಖೆ, ನಾಡಕಚೇರಿ, ಪಾಸ್‌ಪೋರ್ಟ್ ಕಚೇರಿ ಬೆಂಗಳೂರು ವಿವಿ ಸೇರಿದಂತೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸುಮಾರು 96 ಸೇವಾಕೇಂದ್ರಗಳ, ಹಣ ಪಾವತಿ ಹಾಗೂ 14ಕ್ಕೂ ಹೆಚ್ಚು ದೂರಸಂಪರ್ಕ ಕೇಂದ್ರಗಳ ಬಿಲ್ ಪಾವತಿ ಮೊದಲಾದವುಗಳು ಬೆಂಗಳೂರು ಒನ್ ಮುಖೇನ ನಡೆಯುತ್ತವೆ. ತ್ವರಿತ, ನಿಶ್ಚಿತ ಹೊಣೆಗಾರಿಕೆ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಇಡಿಸಿಎಸ್ ನಿರ್ದೇಶನಾಲಯ, ಪಿಪಿಪಿ ಮಾದರಿಯಲ್ಲಿ ನಿರ್ವಹಿಸಲು ಸಿಎಂಎಸ್ ಕಂಪ್ಯೂಟರ್ಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.

ಬದಲಾವಣೆ ಹೇಗೆ?: ಬಿಬಿಎಂಪಿ ವ್ಯಾಪ್ತಿಯಲ್ಲಿ 93 ಬೆಂಗಳೂರು ಒನ್ ಕೇಂದ್ರಗಳಿದ್ದು, ಇದರಲ್ಲಿ ಶೇ.80ರಷ್ಟು ಹಣ ನಗದು ರೂಪದಲ್ಲಿಯೇ ಸಂಗ್ರಹವಾಗುತ್ತದೆ. ನಗದು ರೂಪದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹಣದ ಪೈಕಿ ರೂ.100, 50ರ ಮುಖ ಬೆಲೆಯದ್ದಾಗಿರುತ್ತದೆ. ಈ ಕೇಂದ್ರದಲ್ಲಿ ಮುಖಬೆಲೆಯ ನೋಟುಗಳನ್ನು ಕಮೀಷನ್ ಆಧಾರದಲ್ಲಿ ಸಂಸ್ಥೆಯ ಮುಖ್ಯಸ್ಥರು ಅಮಾನೀಕರಣಗೊಂಡ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಟ್ಟಿದ್ದಾರೆ ಎಂದು ದೂರಿ ದಾಖಲೆ ಬಿಡುಗಡೆ ಮಾಡಿದರು.

2016ರ ನ.9 ರಿಂದ 30 ರವರೆಗಿನ 22 ದಿನಗಳಲ್ಲಿ 120.67 ಕೋಟಿ ರೂ. ಡಿಸೆಂಬರ್ ತಿಂಗಳಿನಲ್ಲಿ 96.53 ಕೋಟಿ ರೂ., 2017ರ ಜನವರಿ-104.88 ಕೋಟಿ, ಫೆಬ್ರವರಿ-109.59 ಕೋಟಿ, ಮಾರ್ಚ್-113.26 ಕೋಟಿ ರೂ.ಗಳು ಸೇರಿದಂತೆ 141 ದಿನಗಳ ಅವಧಿಯಲ್ಲಿ 544.96 ಕೋಟಿ ರೂ. ಸಂಗ್ರಹವಾಗಿದ್ದು, ಇದರಲ್ಲಿ ಶೇ.80ರಷ್ಟು ಹಣ 100 ಮತ್ತು 50ರ ಮುಖಬೆಲೆಯದ್ದಾಗಿದೆ ಎಂದರು.

ಈ ಅವಧಿಯಲ್ಲಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ಜಮಾ ಮಾಡಿ, ಕಡಿಮೆ ಮುಖಬೆಲೆಯ 410 ಕೋಟಿ ರೂ.ಗಳನ್ನು ಆಯಾ ಇಲಾಖೆಗಳ ಅಧಿಕೃತ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡದೆ ಕಮೀಷನ್ ಆಧಾರದಲ್ಲಿ ಈ ಮೂವರಿಗೆ ಬೆಂಗಳೂರು ಒನ್ ಕೇಂದ್ರದ ಮುಖ್ಯಸ್ಥರು ನೀಡಿದ್ದಾರೆಂದು ಗಂಭೀರ ಆರೋಪ ಮಾಡಿದರು.

ಬಹುಕೋಟಿ ಅವ್ಯವಹಾರವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕೆಂದು ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಬೇಕು ಎಂದು ಎನ್.ಆರ್.ರಮೇಶ್ ಆಗ್ರಹಿಸಿದರು.

ದೂರು ಸಲ್ಲಿಕೆ

ನೋಟು ಬದಲಾವಣೆ ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸಿಬಿಐ, ಜಾರಿ ನಿರ್ದೇಶನಾಲಯ, ಎಸಿಬಿ ಮತ್ತು ಲೋಕಾಯುಕ್ತಗೆ ಎನ್.ಆರ್.ರಮೇಶ್ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News