ಮೈಸೂರು: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿದ ಖದೀಮ
Update: 2018-07-06 17:15 GMT
ಮೈಸೂರು,ಜು.6: ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೋರ್ವ ಮೈಸೂರಿನ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಚಿನ್ನದ ಮಳಿಗೆಯಲ್ಲಿ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳ್ಳ ಚಿನ್ನದ ಸರ ಎಗರಿಸಿದ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಜೂಕಿನಿಂದ ಕಳ್ಳತನ ಮಾಡಿ ಶೂ ಒಳಗೆ ಸರ ಹಾಕಿಕೊಂಡಿದ್ದು, ಆತ ಕದ್ದಿದ್ದು 50 ಸಾವಿರ ಮೌಲ್ಯದ 16.3 ಗ್ರಾಂ ತೂಕದ ಚಿನ್ನದ ಸರವೆಂದು ಹೇಳಲಾಗಿದೆ. ತಾನೂ ಗ್ರಾಹಕನ ಜೊತೆ ಬಂದಿರುವುದಾಗಿ ನಟಿಸಿದ್ದ. ಮಳಿಗೆಯಲ್ಲಿ 50ಕ್ಕೂ ಅಧಿಕ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಆದರೂ ಊಟದ ಸಮಯವನ್ನು ನೋಡಿ ಕಳ್ಳತನ ಮಾಡಿದ್ದಾನೆ. ಜೂನ್ 27ರಂದು ಕಳ್ಳತನ ಮಾಡಿದ್ದು, ಜುಲೈ 3ರಂದು ಬೆಳಕಿಗೆ ಬಂದಿದೆ. ಚಿನ್ನದ ಲೆಕ್ಕ ಸಿಗದ ವೇಳೆ ಎಲ್ಲಾ ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ಈ ಸಂಬಂಧ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ಸಹಾಯಕ ಮ್ಯಾನೇಜರ್ ಇರ್ಷಾದ್ ದೂರು ನೀಡಿದ್ದಾರೆ.