ಧಾರವಾಡ: ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಚಾಲನೆ

Update: 2018-07-07 16:26 GMT

ಧಾರವಾಡ, ಜು.7: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಅನುಷ್ಠಾನಗೊಳಿಸಿರುವ ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ರಾಯಮಾನೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿಸಿ ಸಂಚಾರಿ ಕ್ಯಾಂಟೀನ್ ಉದ್ಘಾಟಿಸಿದ ಜಿಲ್ಲಾಧಿಕಾರಿ, ಶುಚಿ-ರುಚಿಯಾದ ಉಪಾಹಾರ, ಊಟವನ್ನು ಗ್ರಾಹಕರು ಇರುವಲ್ಲಿಗೇ ತೆರಳಿ ಯೋಗ್ಯ ದರದಲ್ಲಿ ಒದಗಿಸಿದರೆ, ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಗುಣಮಟ್ಟ ಹಾಗೂ ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಜಿಲ್ಲೆಯ ಜನರಿಗೆ ಒಳ್ಳೆಯ ಆಹಾರ ಪೂರೈಸಬೇಕು ಎಂದು ಹಾರೈಸಿದರು.

ಸವಿರುಚಿ ಕ್ಯಾಂಟೀನ್‌ನ ಉಪಾಹಾರವನ್ನು ಸವಿದ ಜಿ.ಪಂ.ಸಿಇಓ ಸ್ನೇಹಲ್ ರಾಯಮಾನೆ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಲು ಸರಕಾರ ರೂಪಿಸಿರುವ ಸವಿರುಚಿ ಕ್ಯಾಂಟೀನ್ ಯೋಜನೆ ಸಹಕಾರಿಯಾಗಿದೆ. ಮಹಿಳಾ ಒಕ್ಕೂಟದ ಸದಸ್ಯರು ಇದರ ಲಾಭ ಪಡೆಯಬೇಕು ಎಂದರು.

 2017-18ನೆ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸವಿರುಚಿ ಸಂಚಾರಿ ಕ್ಯಾಂಟೀನ್ ಘೋಷಣೆ ಮಾಡಿದ್ದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 10 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲವನ್ನು ಜಿಲ್ಲೆಯ ಮಹಿಳಾ ಒಕ್ಕೂಟಕ್ಕೆ ನೀಡಲಾಗಿದೆ. ಈ ಹಣದಲ್ಲಿ 6 ಲಕ್ಷ ರೂ.ವೆಚ್ಚದಲ್ಲಿ ನಿರ್ದಿಷ್ಟ ವಿನ್ಯಾಸಗೊಳಿಸಿದ ವಾಹನ, ಉಳಿದ 4 ಲಕ್ಷ ರೂ.ವೆಚ್ಚದಲ್ಲಿ ಪಾಕೋಪಕರಣಗಳು, ಆಹಾರ ಸಾಮಗ್ರಿಗಳು, ಪೀಠೋಪಕರಣಗಳನ್ನು ಖರೀದಿಸಿ ವಹಿವಾಟು ನಿರ್ವಹಿಸಬೇಕು. 6 ತಿಂಗಳ ಕಾಲಾವಕಾಶದ ನಂತರ ಪ್ರತಿ ತಿಂಗಳು 15 ಸಾವಿರ ರೂ.ಗಳನ್ನು ಮರುಪಾವತಿ ಮಾಡಬೇಕು. ಕಾಮಧೇನು ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಕ್ಕೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎಸ್.ಮಾಸಮಡ್ಡಿ, ಪುಟ್ಟಪ್ಪ, ಮಹಿಳಾ ಅಭಿವೃದ್ಧಿ ನಿಗಮದ ನಸ್ರೀನ್ ಹಕೀಂ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸೋನಿಯಾ ಬ್ಯಾಳಿ,ಉಪಾಧ್ಯಕ್ಷೆ ಅನಸೂಯಾ ಲಿಗಾಡಿ, ನವಲಗುಂದ ತಾಲ್ಲೂಕು ಘಟಕದ ಅಧ್ಯಕ್ಷೆ ಬಸಮ್ಮ ಮೆಳವಂಕಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News