ಸೊರಬ: ತಾಲೂಕು ಬಿಜೆಪಿ ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ

Update: 2018-07-09 12:06 GMT

ಸೊರಬ,ಜು.09: ಸ್ವಚ್ಛ ಭಾರತ ಅಭಿಯಾನವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಇದಾಗಿದ್ದು, ಪ್ರತಿಯೊಬ್ಬರೂ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.

ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಹೊಸ ಯೋಜನೆಗಳಿಂದಾಗಿ ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಉತ್ತಮ ಆಡಳಿತ ನೀಡುವ ಮೂಲಕ ಜನ ಮನ್ನಣೆ ಪಡೆದುಕೊಂಡಿದ್ದಾರೆ. ಯುವಕರು ಸೇರಿದಂತೆ ಎಲ್ಲ ವಯೋಮಾನದ ಜನರು ಮೋದಿ ಅವರನ್ನು ಮಾದರಿ ವ್ಯಕ್ತಿಯಾಗಿ ಅನುಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗಲಿದೆ. ಬಳಸಿರುವ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ತ್ಯಾಜವನ್ನು ಇಲ್ಲಿಂದ ಸಂಗ್ರಹಿಸಿ ಬೇರೆಡೆಗೆ ಬಿಸಾಡುವುದನ್ನು ಬಿಟ್ಟು, ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಮಾತ್ರ ಸ್ವಚ್ಛತೆಗೆ ಆದ್ಯತೆ ನೀಡಿದಂತಾಗುತ್ತದೆ. ಇದಕ್ಕಾಗಿ ಸರ್ಕಾರವು ನಿರ್ವಹಣಾ ಘಟಕಕ್ಕೆ ಸಹಾಯಧನ ನೀಡಿದಲ್ಲಿ ಖಾಸಗಿಯವರೊಂದಿಗೆ ಸೇರಿ ನಿರ್ವಹಣೆಗೆ ಸಹಾಯಕವಾಗುತ್ತದೆ ಎಂದರು. 

ಈ ಹಿಂದಿನ ಅವಧಿಯಲ್ಲಿ ತಾಲೂಕಿನ ಬಡ ಬಗರ್ ಹುಕುಂ ಸಾಗುವಳಿದಾರರ ಹೆಸರಿನಲ್ಲಿ 15ರಿಂದ 20 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ. ರೈತರ ಹೆಸರಿನಲ್ಲಿ ವಂಚನೆ ಮಾಡಿದ ಅಧಿಕಾರಿಗಳನ್ನು ತನಿಖೆ ಮಾಡಲಾಗುವುದು ಎಂದರು. ಬಗರ್ ಹುಕುಂ ಸಾಗುವಳಿದಾರರ ಹೆಸರಿನಲ್ಲಿ ನಡೆಸಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದೇನೆ. ಈ ಬಗ್ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲಾಧಿಕಾರಿಗಳಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಆದರೆ ತಾಲೂಕಿನಲ್ಲಿ ವಾಸವಿಲ್ಲದವರಿಗೂ ಬಗರ್ ಹುಕುಂ ಜಮೀನು ಮಂಜೂರು ಮಾಡಲಾಗಿದೆ. ಸಿಒಡಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗಿದೆ ಎಂದರು.

ಕಾರ್ಯಕರ್ತರೊಂದಿಗೆ ರೇಣುಕಾಂಬಾ ದೇವಸ್ಥಾನದ ಆವರಣ, ತೇರು ಬೀದಿ ಹಾಗೂ ಎಸ್ಸಿ. ಎಸ್‍ಟಿ ಕೇರಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಪಾಲ್ಗೊಂಡಿದ್ದರು. 

ಸ್ವಚ್ಛತಾ ಅಭಿಯಾನದಲ್ಲಿ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್, ಚಂದ್ರಪ್ಪ ಅಂಗಡಿ, ಈಶ್ವರ ಚನ್ನಪ್ಪಟ್ಟಣ, ಗೀತಾ ಮಲ್ಲಿಕಾರ್ಜುನ, ಗುರುಪ್ರಸನ್ನಗೌಡ, ಹನುಮಂತಪ್ಪ, ದೇವೇಂದ್ರಪ್ಪ, ಶಶಿಕಲಾ, ಶಿವಯೋಗಿ ಡಿ., ಗಂಗಮ್ಮ, ಯೂಸೂಫ್ ಸಾಬ್, ತಿರುಪತಿ, ರೇವಣಪ್ಪ, ಮುಕುಂದಪ್ಪ, ಎಂ.ಡಿ.ಉಮೇಶ್, ಪರಶುರಾಮ ಭೋವಿ, ಮಣ್ಣೆತ್ತಿ ಪರಮೇಶ್ವರ, ಸಣ್ಣಪ್ಪ, ಸತ್ಯವತಿ, ವಸುಂದರಾ ಭಟ್, ಶಿವಯೋಗಿ, ಶಬ್ಬೀರ್, ನಾಗಮ್ಮ ಗುಡವಿ, ಶಿವಕುಮಾ, ಅನ್ವರ್ ಸಾಬ್, ಕೆರೆಯಪ್ಪ, ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News