ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಯಾನ

Update: 2018-07-17 18:31 GMT

‘‘ಮುಪ್ಪು, ರೋಗ, ಸಾವು ಇವು ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಸಂಭವಿಸುವ ಘಟನೆಗಳಾಗಿದ್ದು ಬುದ್ಧ ಅವುಗಳನ್ನು ನೋಡಿಯೇ ನೋಡಿರುತ್ತಾನೆ. ಆದ್ದರಿಂದ ಇವುಗಳನ್ನೆಲ್ಲ ಮೊದಲು ನೋಡಿ ಆತ ಪರಿವ್ರಾಜಕನಾದ ಎಂಬ ಸಾಂಪ್ರದಾಯಿಕ ವಿವರಣೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈ ವಿವರಣೆ ತೋರಿಕೆಯದ್ದಾಗಿದ್ದು, ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಈ ವಿವರಣೆ ಅಕ್ಷರಶಃ ಒಪ್ಪಿಗೆಯಾಗುವಂಥದ್ದಲ್ಲ. ಹೀಗಿರುವಾಗ ಬುದ್ಧ ಅರಮನೆ ತೊರೆದು ಸನ್ಯಾಸ ಸ್ವೀಕರಿಸಲು ಇದು ಉತ್ತರ ಅಲ್ಲವಾದರೆ ನಿಜವಾದ ಉತ್ತರವಾದರೂ ಏನು?’’ ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ಹಾಗೆಯೇ ಉತ್ತರವನ್ನು ಕಂಡುಕೊಳ್ಳುತ್ತಾರೆ.


ಬೌದ್ಧ ಧರ್ಮದಲ್ಲಿ ಎರಡು ಪಂಥಗಳಿವೆ. 1.ಹೀನಯಾನ 2.ಮಹಾಯಾನ. ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದಾಗ ಅವರ ಪಂಥವನ್ನು ನವಯಾನ ಎಂದು ಕರೆದರು. ಹಾಗೆಯೇ ಮಹಾರಾಷ್ಟ್ರದ ಬೌದ್ಧರನ್ನು ನವಬೌದ್ಧರು ಅಥವಾ ಹೊಸಬೌದ್ಧರು ಎಂದು ಕರೆಯಲಾಗುತ್ತದೆ. ಆದರೆ ಶೋಷಿತರು ಹಳೆಯ ಬೌದ್ಧರು. ಯಾಕೆಂದರೆ ಅಂಬೇಡ್ಕರ್‌ರೇ ಒಂದೆಡೆ ಹೇಳಿದ್ದಾರೆ ಏಶ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು ಎಂದು.

ಈ ದಿಸೆಯಲ್ಲಿ ಸದ್ಯ ಯಾನ ಎಂದರೇನು? ಎಂಬುದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ.
ಯಾನ ಎಂದರೆ ಪಯಣ ಎಂದರ್ಥ. ಅಂದರೆ ಬೌದ್ಧ ಪಯಣ ಎಂದರ್ಥ. ಜೀವನದ ಪಯಣ ಎನ್ನಬಹುದು. ಹಾಗಿದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದಾಗ ಆಗ ಅಸ್ತಿತ್ವದಲ್ಲಿದ್ದ ಬೌದ್ಧ ಧರ್ಮವನ್ನು ಯಥಾವತ್ ಸ್ವೀಕರಿಸಿದರೇ? ಊಹ್ಞೂಂ. ನಿಜ ಹೇಳಬೇಕೆಂದರೆ ಬುದ್ಧ ಅರಮನೆ ತೊರೆದು ಪರಿವ್ರಾಜಕನಾಗಲು ಸಂಬಂಧಿಸಿದ ಮೂಲ ಕತೆಯಾದ, ಪ್ರಸಿದ್ಧ ಕತೆಯಾದ ಆತ ರೋಗಿಯೊಬ್ಬನನ್ನು ನೋಡಿದ, ವೃದ್ಧನೊಬ್ಬನನ್ನು ನೋಡಿದ, ಸತ್ತ ಮನುಷ್ಯನೊಬ್ಬನನ್ನು ನೋಡಿದ ಎಂಬ ಆ ಸಾಂಪ್ರದಾಯಿಕ ಕತೆಯನ್ನೇ ಅಂಬೇಡ್ಕರ್ ನಿರಾಕರಿಸಿದರು. ಇದಕ್ಕೆ ಅವರು ಕೊಡುವ ಕಾರಣ ಪರಿವ್ರಾಜಕ(ಸನ್ಯಾಸ)ವನ್ನು ಬುದ್ಧ ಸ್ವೀಕರಿಸಿದ್ದು ಆತನ 29ನೇ ವಯಸ್ಸಿನಲ್ಲಿ. ಆ ಮೂರು ದೃಶ್ಯಗಳನ್ನು(ರೋಗಿ, ವೃದ್ಧ, ಸತ್ತ ಮನುಷ್ಯ) ನೋಡಿ ಆತ ಸನ್ಯಾಸ ಸ್ವೀಕರಿಸಿದನೆನ್ನುವುದಾದರೆ ಅದಕ್ಕೂ ಮೊದಲು ಅಂದರೆ ಆತನ 29ನೇ ವಯಸ್ಸಿಗೂ ಮೊದಲು ಆ ಮೂರು ದೃಶ್ಯಗಳನ್ನು ಅತ ನೋಡಿಯೇ ಇರಲಿಲ್ಲ ಎನ್ನುವುದು ಅದು ಹೇಗೆ ಸಾಧ್ಯ? ಎಂದು.

ಮುಂದುವರಿದು ಅವರು ‘‘ಮುಪ್ಪು, ರೋಗ, ಸಾವು ಇವು ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಸಂಭವಿಸುವ ಘಟನೆಗಳಾಗಿದ್ದು ಬುದ್ಧ ಅವುಗಳನ್ನು ನೋಡಿಯೇ ನೋಡಿರುತ್ತಾನೆ. ಆದ್ದರಿಂದ ಇವುಗಳನ್ನೆಲ್ಲ ಮೊದಲು ನೋಡಿ ಆತ ಪರಿವ್ರಾಜಕನಾದ ಎಂಬ ಸಾಂಪ್ರದಾಯಿಕ ವಿವರಣೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈ ವಿವರಣೆ ತೋರಿಕೆಯದ್ದಾಗಿದ್ದು, ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಈ ವಿವರಣೆ ಅಕ್ಷರಶಃ ಒಪ್ಪಿಗೆಯಾಗುವಂಥದ್ದಲ್ಲ. ಹೀಗಿರುವಾಗ ಬುದ್ಧ ಅರಮನೆ ತೊರೆದು ಸನ್ಯಾಸ ಸ್ವೀಕರಿಸಲು ಇದು ಉತ್ತರ ಅಲ್ಲವಾದರೆ ನಿಜವಾದ ಉತ್ತರವಾದರೂ ಏನು?’’ ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ಉತ್ತರವನ್ನು ಕಂಡುಕೊಳ್ಳುತ್ತಾರೆ.

ಒಟ್ಟಾರೆ ಅರ್ಥವಾಗುವುದು ಬುದ್ಧ ರೋಗಿಯೊಬ್ಬನನ್ನು, ವೃದ್ಧನೊಬ್ಬನನ್ನು, ಸತ್ತ ವ್ಯಕ್ತಿಯೊಬ್ಬನನ್ನು ನೋಡಿ ಅರಮನೆ ತೊರೆದ ಎಂಬ ಮೂಲ ಕತೆಯನ್ನೇ ಅಂಬೇಡ್ಕರ್ ಒಪ್ಪದೆ, ಅದನ್ನು ಸಕಾರಣದ ಮೂಲಕ ಪ್ರಶ್ನಿಸಿ ಬೇರೆ ವಿವರಣೆ ಇರಬಹುದಾ ಎಂದು ಹುಡುಕಿದರು ಎಂಬುದು. ಇದಕ್ಕಾಗಿ ಅಂಬೇಡ್ಕರ್ ಕಂಡುಕೊಂಡ ಉತ್ತರ, ‘‘ಆ ಕಾಲದಲ್ಲಿ ಶಾಕ್ಯರು ಮತ್ತು ಕೋಲೀಯ ಎಂಬ ರಾಜ್ಯಗಳ ನಡುವೆ ರೋಹಿಣಿ ನದಿ ನೀರಿನ ಹಂಚಿಕೆ ವಿಚಾರವಾಗಿ ಸಂಘರ್ಷ ನಡೆಯುತ್ತದೆ. ಆ ಸಂಘರ್ಷದಲ್ಲಿ ಬುದ್ಧ ಪ್ರತಿನಿಧಿಸುವ ಶಾಕ್ಯರ ಶಾಕ್ಯ ಸಂಘ ಕೋಲೀಯರ ಮೇಲೆ ಯುದ್ಧ ಸಾರುವ ಬಹುಮತದ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಸಂಘದ ಸದಸ್ಯನಾದ ರಾಜಕುಮಾರ ಸಿದ್ಧಾರ್ಥ(ಬುದ್ಧ) ಹಿಂಸೆಯ ಅಂಶ ಮುಂದೊಡ್ಡಿ ಸಂಘ ಕೈಗೊಂಡ ಈ ಯುದ್ಧದ ತೀರ್ಮಾನವನ್ನು ವಿರೋಧಿಸುತ್ತಾನೆ. ಪರಿಣಾಮ ಸಂಘದ ನಿಯಮ ಉಲ್ಲಂಘಿಸಿದ ರಾಜಕುಮಾರ ಸಿದ್ಧಾರ್ಥ ಶಾಕ್ಯ ಸಂಘದ ನಿಯಮದಂತೆ ಸಂಘದಿಂದ ಶಿಕ್ಷೆಗೊಳಗಾಗುವ ಎಚ್ಚರಿಕೆ ಎದುರಿಸಬೇಕಾಗುತ್ತದೆ. ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಕೂಡ. ಇದರಂತೆ ಸಿದ್ಧಾರ್ಥನಿಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.

1.ಶಾಕ್ಯ ಸಂಘದ ನಿಯಮವನ್ನು ಕಡೆ ಗಳಿಗೆಯಲ್ಲಾದರೂ ಒಪ್ಪಿ ಕೋಲೀಯರ ವಿರುದ್ಧದ ಯುದ್ಧದಲ್ಲಿ ಭಾಗವಹಿಸುವುದು. 2.ಶಿಕ್ಷೆ ಅನುಭವಿಸಲು ಒಪ್ಪಿನೇಣು ಅಥವಾ ದೇಶಭ್ರಷ್ಟನಾಗಿ ಗಡಿಪಾರು ಶಿಕ್ಷೆ ಅನುಭವಿಸುವುದು.

3.ಆತನ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲು ಮತ್ತು ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಂಘಕ್ಕೆ ಅನುಮತಿ ನೀಡುವುದು.

ಅಂದಹಾಗೆ ಶಾಂತಿ ಧೂತ ಬುದ್ಧ ಮೊದಲನೆಯ ತೀರ್ಮಾನ ಅಂದರೆ ಖಡಾಖಂಡಿತವಾಗಿ ಕೋಲೀಯರ ವಿರುದ್ಧ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸುತ್ತಾನೆ. ಮೂರನೆಯ ತೀರ್ಮಾನ ಅಂದರೆ ತನ್ನ ಕುಟುಂಬದ ಸದಸ್ಯರಿಗೆ ತನ್ನಿಂದ ತೊಂದರೆಯಾಗುವುದನ್ನು ಆತ ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ತಪ್ಪು ತನ್ನದಾಗಿರುವುದರಿಂದ ಶಿಕ್ಷೆ ತನಗೆ ಮಾತ್ರ ಸಲ್ಲಬೇಕು ಎಂದು ನೇಣು ಶಿಕ್ಷೆಗೆ ಅಥವಾ ರಾಜ್ಯದಿಂದ ಗಡಿಪಾರು ಶಿಕ್ಷೆಗೆ ತನ್ನನ್ನು ಒಳಪಡಿಸಬಹುದು ಎಂದು ಆತ ಶಾಕ್ಯ ಸಂಘಕ್ಕೆ ಹೇಳುತ್ತಾನೆ. ಅದರಂತೆ ಶಾಕ್ಯಸಂಘ ರಾಜಕುಮಾರ ಸಿದ್ಧಾರ್ಥನಿಗೆ ಗಡಿಪಾರು ಶಿಕ್ಷೆ ವಿಧಿಸುತ್ತದೆ, ಸಿದ್ಧಾರ್ಥ ರಾಜ್ಯ ತೊರೆಯುತ್ತಾನೆ.’’ ಅಂಬೇಡ್ಕರ್ ಕೊಡುವ ಈ ವಿವರಣೆಯಲ್ಲಿ ಖಂಡಿತ ಅವಾಸ್ತವಿಕವಾದ ಅಂಶ ಕಿಂಚಿತ್ತೂ ಇಲ್ಲ. ನಿಜ, ಇಲ್ಲಿ ರೋಚಕತೆ ಇಲ್ಲದಿರಬಹುದು ಆದರೆ ರಾಜ್ಯ ತೊರೆಯಲು ಪ್ರಮುಖ ಕಾರಣವಂತೂ ಇದೇ ಆಗುತ್ತದೆ ಮತ್ತು ಇದನ್ನು ಯಾರೂ ಕೂಡ ಪ್ರಶ್ನಿಸಲಾರರು.

ಹಾಗಿದ್ದರೆ ಇದಕ್ಕೆ ಆಕರ ಗ್ರಂಥವಾಗಿ ಅಂಬೇಡ್ಕರ್ ಯಾವ ಗ್ರಂಥ ಬಳಸುತ್ತಾರೆ? ಅದಕ್ಕೂ ಕೂಡ ಉತ್ತರ ಇದೆ. ಅದೆಂದರೆ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿದಾಗ ಸನ್ಮಾನ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ತಾವೇ ಬರೆದ ಗೌತಮ ಬುದ್ಧರ ಜೀವನ ಚರಿತ್ರೆಯ ಪುಸ್ತಕವನ್ನು ಬಾಲಕ ಅಂಬೇಡ್ಕರ್‌ಗೆ ಕೊಡುತ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತು. ಮರಾಠಿಯಲ್ಲಿ ಬುದ್ಧನ ಆ ಜೀವನ ಚರಿತ್ರೆ ಬರೆದು(ಬರೆದ ವರ್ಷ 1898) ಬಾಲಕ ಅಂಬೇಡ್ಕರ್‌ರಿಗೆ ಕೊಡುಗೆ ಇತ್ತವರು ಅಂದಿನ ಸಮಾಜ ಸುಧಾರಕರಾದ ಬಾಂಬೆಯ ವಿಲ್ಸನ್ ಹೈಸ್ಕೂಲ್ನ ಮಾಜಿ ಪ್ರಾಂಶುಪಾಲರಾದ ಕೃಷ್ಣಾಜಿ ಅರ್ಜುನ್ ಕೆಲೂಸ್ಕರ್‌ರವರು. ಈ ನಿಟ್ಟಿನಲ್ಲಿ ರೋಹಿಣಿ ನದಿಯ ನೀರಿನ ವಿಚಾರವಾಗಿ ಸಿದ್ಧಾರ್ಥನು ರಾಜ್ಯ ತೊರೆದ ಪ್ರಸಂಗವನ್ನು ಅಂಬೇಡ್ಕರ್‌ರು ತಾವು ಪಡೆದದ್ದು ಕೆಲೂಸ್ಕರ್‌ರ ಆ ಕೃತಿಯಲ್ಲೇ!

ನಾಲ್ಕು ಆರ್ಯ ಸತ್ಯಗಳನ್ನು ಒಪ್ಪದ ಅಂಬೇಡ್ಕರ್‌ರು:

ಬೌದ್ಧ ಧರ್ಮದಲ್ಲಿ ನಾಲ್ಕು ಆರ್ಯ ಸತ್ಯಗಳು ಎಂಬ ಪ್ರಮುಖ ಅಂಶ ಬರುತ್ತದೆ. ಸಾಮಾನ್ಯವಾಗಿ ಮಹಾಬೋಧಿ ಸೊಸೈಟಿ ಪ್ರಕಟಿಸುವ ಕೃತಿಗಳನ್ನು ಓದಿದ ಬೌದ್ಧರಿಗೆ ಅವು ಯಾವುವು ಎಂದು ತಿಳಿದಿರುತ್ತವೆ. ಅವುಗಳೆಂದರೆ 1.ದುಃಖ ಸತ್ಯ. 2.ದುಃಖಕ್ಕೆ ಮೂಲ ಇದೆ ಎಂಬ ಸತ್ಯ. 3.ದುಃಖವನ್ನು ಕೊನೆಗಾಣಿಸಬಹುದು ಎಂಬ ಸತ್ಯ. 4. ಆ ದುಃಖವನ್ನು ಕೊನೆಗಾಣಿಸುವ ಮಾರ್ಗ ಯಾವುದೆಂಬ ಸತ್ಯ. ಆಶ್ಚರ್ಯವೆಂದರೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಈ ನಾಲ್ಕು ಆರ್ಯ ಸತ್ಯಗಳನ್ನು ಒಪ್ಪುವುದಿಲ್ಲ. ಅವರು ಹೇಳುವುದು ಈ ಆರ್ಯ ಸತ್ಯಗಳ ಸೂತ್ರ ಬೌದ್ಧ ಧರ್ಮದ ಮೂಲ ಬೇರನ್ನೇ ಕತ್ತರಿಸುತ್ತದೆ ಎಂದು. ಏಕೆಂದರೆ ಅವರು ಹೇಳುವುದು ಆರ್ಯ ಸತ್ಯಗಳ ಪ್ರಕಾರ ಈ ಜೀವನ ದುಃಖ, ಸಾವು ಕೂಡ ದುಃಖ, ಪುನರ್ಜನ್ಮ ಕೂಡ ದುಃಖ, ಆದ್ದರಿಂದ ಪ್ರತಿಯೊಂದಕ್ಕೂ ಕೊನೆ ಎಂಬುದಿದೆ ಎಂದಾದರೆ ತತ್ವಜ್ಞಾನವಿರಲಿ ಅಥವಾ ಧರ್ಮವಿರಲಿ ಯಾವುದೂ ಕೂಡ ಈ ಪ್ರಪಂಚದಲ್ಲಿ ಮನುಷ್ಯ ಸಂತಸದಿಂದಿರಲು ಸಹಾಯ ಮಾಡುವುದಿಲ್ಲ.

ಏಕೆಂದರೆ ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವುದಾದರೆ ಜೀವನದಲ್ಲಿ ಸಹಜವಾಗಿ ಅಂತರ್ಗತವಾಗಿರುವ ಆ ದುಃಖದಿಂದ ಮನುಷ್ಯನನ್ನು ತಪ್ಪಿಸಲು ಬುದ್ಧನಾದರೂ ಏನು ಮಾಡಲು ಸಾಧ್ಯ? ಧರ್ಮವಾದರೂ ಏನು ಮಾಡಲು ಸಾಧ್ಯ? ಆದ್ದರಿಂದ ನಾಲ್ಕು ಆರ್ಯ ಸತ್ಯಗಳು ಮನುಷ್ಯನಿಗೆ ಭರವಸೆಯನ್ನು ನಿರಾಕರಿಸುತ್ತವೆ. ಈ ನಿಟ್ಟಿನಲ್ಲಿ ಆ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಗಳನ್ನು ನಿರಾಶವಾದದ ಬೋಧನೆಗಳನ್ನಾಗಿ ಮಾಡುತ್ತವೆ ಎನ್ನುತ್ತಾರೆ. ಅದರಲ್ಲೂ ಅವರು ಹೇಳುವುದು ಬೌದ್ಧರಲ್ಲದವರಿಗೆ ಬೌದ್ಧ ಧರ್ಮದ ಬೋಧನೆಗಳನ್ನು ಒಪ್ಪಲು ಈ ನಾಲ್ಕು ಆರ್ಯಸತ್ಯಗಳು ಬಹುದೊಡ್ಡ ತಡೆಯಾಗಿವೆ ಎಂದು. ಈ ಹಿನ್ನೆಲೆಯಲ್ಲಿ ಅವರು ಅನುಮಾನ ವ್ಯಕ್ತಪಡಿಸುವುದು ಇವು ಈ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಯ ಮೂಲ ತಿರುಳಾಗಿತ್ತೇ ಅಥವಾ ಇವು ಭಿಕ್ಕುಗಳು ನಂತರ ಸೇರಿಸಿದ ಅಂಶಗಳಾಗಿರಬಹುದೇ ಎಂದು. ಮುಂದುವರಿದು ಅಂಬೇಡ್ಕರ್‌ರು ಭಿಕ್ಕುಗಳನ್ನು ಬುದ್ಧ ಸೃಷ್ಟಿಸಿದ್ದೇತಕೆ? ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಅದಕ್ಕೆ ಅವರು ಹೇಳುವುದು ಬುದ್ಧ, ಭಿಕ್ಕು ಗಣವನ್ನು ಅವರು ಪರಿಪೂರ್ಣ ಮನುಷ್ಯರಾಗಲಿ ಎಂದು ಸೃಷ್ಟಿಸಿದನೇ ಅಥವಾ ಸಮಾಜ ಸೇವಕರಾಗಿ ಜನತೆಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ತತ್ವಜ್ಞಾನಿಗಳಾಗಿ ಜನರಿಗಾಗಿ ತಮ್ಮ ಜೀವನ ಮುಡಿಪಿಡಲಿ ಎಂದು ಸೃಷ್ಟಿಸಿದನೇ? ಈ ದಿಸೆಯಲ್ಲಿ ಭಿಕ್ಕು ಪರಿಪೂರ್ಣ ಮನುಷ್ಯನಾದರೆ ದಮ್ಮದ ಬೆಳವಣಿಗೆಯ ಹಿನ್ನೆಲೆಯಲ್ಲಿ ಆತ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಮನುಷ್ಯ ಪರಿಪೂರ್ಣನಾದರೂ ಆತ ಸ್ವಾರ್ಥಿಯಾಗಿರುತ್ತಾನೆ. ಆದರೆ ಭಿಕ್ಕು ಸಮಾಜ ಸೇವಕನಾದರೆ ಖಂಡಿತ ಬೌದ್ಧ ಧರ್ಮಕ್ಕೆ ಆತ ಬಹು ದೊಡ್ಡ ಭರವಸೆಯಾಗುತ್ತಾನೆ ಎನ್ನುತ್ತಾರೆ.
(Buddha and His Dhamma,  Ambedkar writings and speeches, Vol.11, introduction part).

ಖಂಡಿತ, ಬುದ್ಧ ಪರಿವ್ರಾಜಕ(ಸನ್ಯಾಸ) ಸ್ವೀಕರಿಸಲು ಬಾಬಾಸಾಹೇಬ್ ಅಂಬೇಡ್ಕರ್ ಹೇಳುವ ಈ ಕತೆ, ನಾಲ್ಕು ಆರ್ಯ ಸತ್ಯಗಳನ್ನು ಅವರು ಒಪ್ಪದಿರುವುದು, ಹಾಗೆ ಭಿಕ್ಕುಗಳನ್ನು ಸಮಾಜ ಸೇವಕರು ಎನ್ನುವ ಅವರ ವ್ಯಾಖ್ಯೆ ಅಕ್ಷರಶಃ ಬೌದ್ಧ ಧರ್ಮಕ್ಕೆ ಹೊಸ ರೂಪ ಕೊಡುತ್ತದೆ. ಈ ನಿಟ್ಟಿನಲ್ಲಿ ಆ ರೂಪವನ್ನು ನಾವು ನಿಸ್ಸಂಶಯವಾಗಿ ಅಂಬೇಡ್ಕರ್ ಹಾದಿ ಎನ್ನಬಹುದು, ‘ಹೀನಯಾನ’ ಮತ್ತು ‘ಮಹಾಯಾನ’ದಂತೆ ‘ಅಂಬೇಡ್ಕರ್ ಯಾನ’ ಎನ್ನಬಹುದು. ಬುದ್ಧನ ಹಾದಿಯಲ್ಲಿಂದು ಕೋಟ್ಯಂತರ ಜನರು ಸಾಗುತ್ತಿದ್ದಾರೆ. ಅದರಲ್ಲೂ ಶೋಷಿತ ಸಮುದಾಯಗಳ ಬಂಧುಗಳು ಬುದ್ಧನೆಡೆ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಖಂಡಿತ, ಅಂತಹವರೆಲ್ಲರಿಗೆ ಅಂಬೇಡ್ಕರ್ ಯಾನ ಹೊಸ ಮಾರ್ಗ ಆಗಲಿದೆ ಹೊಸ ಬೆಳಕು ಆಗಲಿದೆ.

Writer - ರಘೋತ್ತಮ ಹೊ. ಬ.

contributor

Editor - ರಘೋತ್ತಮ ಹೊ. ಬ.

contributor

Similar News