ಕಾರ್ಲ್‌ಮಾಕ್ಸ್ ಕುರಿತಂತೆ ಮರು ಓದು

Update: 2018-08-02 18:31 GMT

ಸಮಾಜ ವಿಜ್ಞಾನಿ ಕಾರ್ಲ್‌ಮಾರ್ಕ್ಸ್‌ನ 200 ಜನ್ಮದಿನಾಚರಣೆಯ ಸಂದರ್ಭದಲ್ಲಿ ಭಾರತದಲ್ಲೂ ಆತನನ್ನು ಸ್ಮರಿಸುವ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆದಿವೆೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಮಾರ್ಕ್ಸ್ ಭಾರತೀಯ ಜನಜೀವನದಲ್ಲಿ ತನ್ನ ಪ್ರಭಾವವನ್ನು ಬೀರಿದ. ಭಾರತದಲ್ಲಿ ಆಳವಾಗಿ ಬೇರೂರಿದ್ದ ಜಮೀನ್ದಾರರ ಬೇರುಗಳನ್ನು ಅಲುಗಾಡಿಸುವಲ್ಲಿ ಮಾರ್ಕ್ಸ್ ಚಿಂತನೆಗಳು ಸಾಕಷ್ಟು ಕೆಲಸ ಮಾಡಿವೆೆ. ಈಶಾನ್ಯ ಭಾರತ ಮತ್ತು ಕೇರಳದಲ್ಲಿ ಮಾರ್ಕ್ಸ್ ಚಿಂತನೆ ಜನರ ಬದುಕಿನಲ್ಲಿ ಬೀರಿದ ಪರಿಣಾಮ ದೊಡ್ಡದು. ಆದರೆ ವಿಶ್ವದಲ್ಲಿ ಮಾರ್ಕ್ಸ್ ಚಿಂತನೆಯನ್ನು ವಿಮರ್ಶಾತ್ಮಕವಾಗಿ ನೋಡುವ ಕೆಲಸವೊಂದು ಆರಂಭವಾಗಿದೆ. ಮಾರ್ಕ್ಸ್ ಚಿಂತನೆ ಭಾರತದಂತಹ ದೇಶದ ಮೇಲೆ ಸುದೀರ್ಘ ಪರಿಣಾಮವನ್ನು ಬೀರಲು ಯಾಕೆ ವಿಫಲವಾಯಿತು ಮತ್ತು ಅದಕ್ಕೆ ಭಾರತೀಯ ಮಾರ್ಕ್ಸ್‌ವಾದಿಗಳ ಕೊಡುಗೆ ಎಷ್ಟರಮಟ್ಟಿಗಿದೆ ಎನ್ನುವ ಆತ್ಮವಿಮರ್ಶೆ ನಡೆಸಬೇಕಾದ ಸಂದರ್ಭ ಇದು. ಬಹುಶಃ ಭಾರತೀಯ ಎಡ ಪಂಥೀಯ ವಿಚಾರಧಾರೆಗಳನ್ನು ಎತ್ತಿಕೊಂಡವರಲ್ಲಿ ಬಹುತೇಕರು ಮೇಲ್ಜಾತಿಗೆ ಮುಖ್ಯವಾಗಿ ಬ್ರಾಹ್ಮಣರೇ ಆಗಿರುವುದರಿಂದ, ಅವರು ಪ್ರಜ್ಞಾಪೂರ್ವಕವಾಗಿಯೋ ಅಥವಾ ಮಾಕ್ಸ್ ಚಿಂತನೆಯ ಯಥಾವತ್ ಅನುಷ್ಠಾನದ ಮೇಲೆ ನಂಬಿಕೆಯಿರಿಸಿಕೊಂಡವರಾದುದರಿಂದಲೋ, ಜಾತಿ ಸಂಘರ್ಷವನ್ನು ಸಂಪೂರ್ಣವಾಗಿ ಬದಿಗಿಟ್ಟಿತು. ಈ ದೇಶದ ಬಡವರು ಮತ್ತು ಶೋಷಿತರೆಂದು ಗುರುತಿಸಲ್ಪಟ್ಟ ದಲಿತರು ಎಡಪಂಥೀಯ ಚಳವಳಿಯ ಜೊತೆಗೆ ಸೇರಿಕೊಳ್ಳದೇ ಇದ್ದುದು, ದಲಿತರು ಎಡಪಂಥೀಯಚಳವಳಿಯನ್ನು ಅಪನಂಬಿಕೆಯಿಂದ ನೋಡಿದ್ದು ದೇಶದಲ್ಲಿ ಕಮ್ಯುನಿಸಂ ಕುಸಿಯಲು ದೊಡ್ಡ ಕಾರಣವಾಯಿತು. ಇದೀಗ ಮಾರ್ಕ್ಸ್‌ನ 200ನೇ ಜನ್ಮದಿನಾಚರಣೆಯನ್ನು ನೆಪವಾಗಿರಿಸಿಕೊಂಡು, ಆತನ ಚಿಂತನೆಗಳನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನವನ್ನು ದೇಶಾದ್ಯಂತ ಪ್ರಗತಿಪರ ಚಿಂತಕರು ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಅದು ನಡೆಯುತ್ತಿದೆ. ಅದರ ಭಾಗವಾಗಿ ಹಲವು ಪ್ರಕಾಶಕರು ಮಾರ್ಕ್ಸ್ ಚಿಂತನೆಗಳಿಗೆ ಸಂಬಂಧಿಸಿದ ಕೃತಿಗಳನ್ನು ಹೊರತರುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ಲಡಾಯಿ ಪ್ರಕಾಶನ ಹೊರತಂದಿರುವ ‘ಕಾರ್ಲ್ ಮಾರ್ಕ್ಸ್-ತತ್ವಶಾಸ್ತ್ರದ ಬಡತನ’ ಕೃತಿ. ನಾ. ದಿವಾಕರ ಅವರು ಇದನ್ನು ಅನುವಾದಿಸಿದ್ದಾರೆ.

ಮಾರ್ಕ್ಸ್‌ವಾದವನ್ನು ಕಾರ್ಲ್‌ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಗೆಲ್ಸ್ ರೂಪಿಸುತ್ತಿದ್ದ ಕಾಲದಲ್ಲಿ ಮಾರ್ಕ್ಸ್‌ವಾದದ ವಿರುದ್ಧ ಹುರುಳಿಲ್ಲದ ಆರೋಪಗಳು ಮತ್ತು ವಿರೋಧಿ ಅಭಿಪ್ರಾಯಗಳು ನಡೆದವು. ಅದಕ್ಕೆ
ಮಾರ್ಕ್ಸ್‌ವಾದದ ಸ್ಥಾಪಕರು ಸರಿಯಾದ ವಿಧಾನದಲ್ಲಿ ಉತ್ತರ ಕೊಡುತ್ತಲೇ, ಕಾರ್ಮಿಕ ವರ್ಗದ ಜಾಗತಿಕ ಸಿದ್ಧಾಂತವನ್ನು ನಿರ್ಮಾಣ ಮಾಡಿದರು.
ಮಾರ್ಕ್ಸ್‌ವಾದಕ್ಕೆ ಪ್ರೊಧಾನ್ ಅವರು ಮಾಡಿದ ಆರೋಪಕ್ಕೆ ಉತ್ತರವಾಗಿ ಕಾರ್ಲ್‌ಮಾರ್ಕ್ಸ್ ‘ತತ್ವಶಾಸ್ತ್ರದ ಬಡತನ’ ಕೃತಿಯನ್ನು ಬರೆದಿದ್ದಾರೆ. ಮಾರ್ಕ್ಸ್‌ವಾದದ ಸೋಲಿಗೆ ಆ ಸಿದ್ಧಾಂತಗಳು ಬೌದ್ಧಿಕ ಚಿಂತಕರಿಗಷ್ಟೇ ಸೀಮಿತವಾಗಿರುವುದು ಒಂದು ಕಾರಣವಾಗಿದೆ. ಶ್ರೀಸಾಮಾನ್ಯನಿಗೆ ಅರ್ಥೈಸಲು ಜಟಿಲವೆನಿಸುವ ಭಾಷೆ ಒಂದು ದೊಡ್ಡ ಗೋಡೆಯಾಗಿದೆ. ಆದುದರಿಂದಲೇ ಮಾರ್ಕ್ಸ್‌ವಾದವನ್ನು ಆದಷ್ಟು ಸರಳವಾಗಿ ಪ್ರತಿಪಾದಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಪ್ರೊಧಾನ್‌ನ ಆರ್ಥಿಕ ಮತ್ತು ತತ್ವ ಚಿಂತನೆಯ ಧೋರಣೆಗಳನ್ನು ವಿಮರ್ಶಾತ್ಮಕವಾಗಿ ಇಲ್ಲಿ ವಿಶೆ್ಲೀಷಣೆಗೊಳಪಡಿಸಲಾಗಿದೆ.
   ಸದ್ಯದ ಸಂದರ್ಭಕ್ಕೆ ಮಾರ್ಕ್ಸ್ ಎಷ್ಟು ಪ್ರಸ್ತುತ ಎನ್ನುವುದನ್ನು ಉಜ್ಜಿನೋಡುವುದಕ್ಕಾದರೂ ಈ ಕೃತಿಯನ್ನು ಓದುವ ಅಗತ್ಯವಿದೆ. ಮಾರ್ಕ್ಸ್‌ನ ಚಿಂತನೆಗಳ ಕುರಿತಂತೆ ಇರುವ ಹಲವು ಪೂರ್ವಾಗ್ರಹಗಳಿಗೆ ಇಲ್ಲಿ ಉತ್ತರವಿದೆ. ಕೃತಿಯ ಒಟ್ಟು ಪುಟಗಳು 256. ಬೆಲೆ 120 ರೂ. ಆಸಕ್ತರು 94486 85755 ೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News