​ಮಳೆಯಿಂದ ಕರಿಮೆಣಸಿಗೆ ಎಲೆ ಕೊಳೆ ರೋಗ : ನಿಯಂತ್ರಣಕ್ಕೆ ಸಲಹೆ

Update: 2018-08-10 13:20 GMT

ಮಡಿಕೇರಿ ಆ.10 :ಧಾರಾಕಾರ ಮಳೆಯಿಂದ ಕರಿಮೆಣಸಿಗೆ ಎಲೆ ಕೊಳೆ ರೋಗ ಕೊಡಗಿನ ಕೆಲವು ತೋಟಗಳಲ್ಲಿ ಕಾಣಿಸಿಕೊಂಡಿದೆ. ಪಾದ ಕೊಳೆ ರೋಗ (ಶೀಘ್ರ ಸೊರಗು ರೋಗ)ವು ಪೈಟೋಪ್ತೋರಾ ಕ್ಯಾಪ್ಸಿಸಿ ಎಂಬ ಶಿಲೀಂಧ್ರದಿಂದ ಬರುವಂತದಾಗಿದ್ದು, ಇದು ಮೆಣಸಿಗೆ ಬರುವ ಎಲ್ಲಾ ರೋಗಗಳಿಗಿಂತ ಅತ್ಯಂತ ಹಾನಿಕಾರಕ ರೋಗವಾಗಿದೆ ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ ಅವರು ತಿಳಿಸಿದ್ದಾರೆ.

ಈ ರೋಗವು ಸಾಮಾನ್ಯವಾಗಿ ಮುಂಗಾರು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ರೋಗದ ಲಕ್ಷಣಗಳು ಸಸ್ಯದ ಸೋಂಕು ತಗುಲಿದ ಮತ್ತು ಸ್ಥಳದ ಮೇಲೆ ಅವಲಂಭಿಸಿರುತ್ತದೆ. ಈ ರೋಗವನ್ನು ಹತೋಟಿ ಮಾಡದಿದ್ದರೆ ಕರಿಮೆಣಸಿನ ಬಳ್ಳಿಗಳು ಕರಗಿ ಹೋಗಬಹುದು. ಈ ರೋಗವು ಗಾಳಿ ಮತ್ತು ಮಳೆಯಲ್ಲಿ ಬೇಗ ಹರಡುವುದರಿಂದ ತೋಟದ ಇತರ ಬಳ್ಳಿಗಳಿಗು ಹರಡಿ ತೋಟಗಳು ತೊಂಬಾ ಹಾಳಾಗುವ ಸಾಧ್ಯತೆ ಇದ್ದು ಕೃಷಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದ್ದಾರೆ. 

ಕರಿಮೆಣಸಿಗೆ ಎಲೆ ಕೊಳೆ ರೋಗವನ್ನು ಹತೋಟಿ ಮಾಡಲು ಶೇ 1 ರ ಬೋರ್ಡೊ ದ್ರಾವಣವನ್ನು ಕರಿಮೆಣಸಿನ ಬಳ್ಳಿಗೆ ಸಿಂಪಡಿಸುವುದು (2 ಕೆ.ಜಿ ಮೈಲುತುತ್ತು + 2 ಕೆ.ಜಿ ಸುಣ್ಣ 200 ಲೀ ನೀರು). ರೋಗ ಬಂದಿರುವ ಬಳ್ಳಿಗಳಿಗೆ ಮತ್ತು ಅದರ ಸುತ್ತ ಮುತ್ತ ಇರುವ ಬಳ್ಳಿಗಳಿಗೆ ಶೇ 0.1ರ ಮೆಟಲಿಕ್ಸಿಲ್ ಮಾನ್‍ಕೋಜೆಬ್ ದ್ರಾವಣವನ್ನು (1.2-2ಗಾಂ್ರ/ಲೀ) ಸಿಂಪಡಿಸುವುದು, ಅದೇ ದ್ರಾವಣವನ್ನು ಗಿಡಕ್ಕೆ 2 ಲೀಟರ್ ಸುರಿಯುವುದು ಅಗತ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕರಿಮೆಣಸಿಗೆ ಬರುವ ಮತ್ತೊಂದು ಮುಖ್ಯ ರೋಗವೆಂದರೆ ನಿಧಾನ ಸೊರಗು ರೋಗ: ಬಳ್ಳಿಯ ನಿಧಾನ ಸೊರಗುವಿಕೆ ಅದರ ನಿಶಕ್ತತೆಯಿಂದ ಉಂಟಾಗುತ್ತದೆ. ಎಲೆ ಹಳದಿಯಾಗುವಿಕೆ, ಎಲೆ ಉದುರುವಿಕೆ ಮತ್ತು ಬಳ್ಳಿಯ ತುದಿಯಿಂದ ಒಣಗುವುದು ಈ ರೋಗದ ಲಕ್ಷಣಗಳು. ರೋಗ ತಗುಲಿದ ಬಳ್ಳಿಗಳು ಅಕ್ಟೋಬರ್ ನಂತರ ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದಂತೆ ಹಳದಿಯಾಗುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಮೇ-ಜೂನ್ ತಿಂಗಳಲ್ಲಿ ಸೋಂಕು ತಗುಲಿದ ಬಳ್ಳಿಯ ಕೆಲವು ಭಾಗಗಳು ಚೇತರಿಸಿಕೊಂಡು ಚಿಗುರಲು ಆರಂಭಿಸುತ್ತದೆ. ಹೀಗಿದ್ದರೂ, ಮುಂಗಾರು ಮುಕ್ತಾಯವಾಗುತ್ತಿದಂತೆಯೆ ಮತ್ತೆ ರೋಗ ಕಾಣಿಸಿಕೊಂಡು, ಬಳ್ಳಿಗಳು ಕ್ರಮೇಣವಾಗಿ ತನ್ನ ಉತ್ಪಾದನಾ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಈ ರೋಗ ತಗುಲಿದ ಬಳ್ಳಿಗಳಲ್ಲಿ ಲವಣಾಂಶ ಮತ್ತು ನೀರು ಸಾಗಾಣಿಕೆ ಬೇರುಗಳು ಕೊಳೆಯುತ್ತದೆ. ಬೇರುಗಳು ಕೊಳೆಯುವುದರಿಂದ ಎಲೆಗಳಲ್ಲಿಯೂ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಜಂತುಹುಳು ಮಾದರಿಯಾದ ರಢೋಫಿಲಿಸ್ ಸಿಮಿಲೆಸ್ ಮತ್ತು ಮೆಲಯ್ಡೋಗೈನ್ ಇಂಕಾಗ್ನಿಟ ಬಾಧೆಗೊಳಗಾದ ಬೇರುಗಳು ಸುಕ್ಕಾಗುವುದು, ಗಂಟು ಕಟ್ಟುವುದು ಹಾಗೂ ಕೊಳೆಯುವುದನ್ನು ಕಾಣಬಹುದು. ಈ ಬೇರುಗಳು ಕೊಳೆಯುವುದಕ್ಕೆ ಜಂತುಹುಳುಗಳು ಅಥವಾ ಫೈಟೋಪ್ತೋರಾ ಕ್ಯಾಪ್ಸಿಸಿ ಶಿಲೀಂದ್ರ ಕಾರಣವಾಗಬಹುದು ಅಥವಾ ಎರಡೂ ಸೇರಿ ಈ ಬಾಧೆ ಬರಬಹುದು. ಆದ್ದರಿಂದ ಶಿಲೀಂದ್ರನಾಶಕ ಮತ್ತು ಜಂತುನಾಶಕ ಇವೆರಡರ ಬಳಕೆಯಿಂದ ರೋಗ ನಿರ್ವಹಣೆ ಮಾಡಬಹುದು ಡಾ.ಅಂಕೇಗೌಡ ಅವರು ವಿವರಿಸಿದ್ದಾರೆ. 

 ಬೇರು ಕೊಳೆರೋಗವನ್ನು ನಿಯಂತ್ರಿಸಲು ಶೇ 0.2 ಕಾಪರ್ ಆಕ್ಸಿಕ್ಲೋರೈಡ್ ದ್ರಾವಣವನ್ನು ಪ್ರತಿ ಗಿಡಕ್ಕೆ 5 ಲೀ ನಷ್ಟು ಸುರಿಯುವುದು (500ಗ್ರಾಂ/ 200 ಲೀ).ಬೇರು ಗಂಟುಹುಳು ನಿರ್ವಹಣೆಗೆ ಕಾರರ್ಬೊಸಲ್ಫನ್ 2 ಎಂ.ಎಲ್/ಲೀ ಹಾಕಿ 5 ಲೀ. ನಷ್ಟು ಪ್ರತೀ ಬಳ್ಳಿಗೆ ಸುರಿಯುವುದು ಅಗತ್ಯ ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News