ಬಿಹಾರ: ದೇವಸ್ಥಾನದಲ್ಲಿ ಕಾಲ್ತುಳಿತ; ಕನಿಷ್ಠ 15 ಮಂದಿಗೆ ಗಾಯ
Update: 2018-08-13 07:16 GMT
ಮುಝಫರ್ಪುರ, ಆ.13: ಬಿಹಾರದ ಮುಝಫರ್ಪುರ ಜಿಲ್ಲೆಯ ಗರೀಬ್ನಾಥ್ ದೇವಾಲಯದಲ್ಲಿ ಸೋಮವಾರ ಬೆಳಗ್ಗಿನ ಜಾವ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಕನಿಷ್ಠ 15 ಮಂದಿಗೆ ಗಾಯವಾಗಿದೆ.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶಿವ ದೇವಸ್ಥಾನಕ್ಕೆ ಸಾಮಾನ್ಯವಾಗಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಸೋಮವಾರ ಬೆಳಗ್ಗಿನ ಜಾವ ಗರಿಬ್ನಾಥ್ ದೇವಾಲಯದ ಆವರಣದಲ್ಲಿ ದೇವರ ದರ್ಶನ ಪಡೆಯಲು ಭಕ್ತರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ಹಲವು ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ರಕ್ಷಣಾಕಾರ್ಯದ ಜೊತೆಗೆ ಪರಿಹಾರ ಕಾರ್ಯವನ್ನೂ ಆರಂಭಿಸಿದ್ದಾರೆ.