ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರತ್ತ ಗುಂಡು ಹಾರಿಸಿದ ದುಷ್ಕರ್ಮಿ

Update: 2018-08-13 10:08 GMT

ಹೊಸದಿಲ್ಲಿ,ಆ.13 : ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್  ಮೇಲೆ ದುಷ್ಕರ್ಮಿಯೊಬ್ಬ ರಫಿ ಮಾರ್ಗ್ ಪ್ರದೇಶದಲ್ಲಿರುವ ಕಾನ್ಸ್‍ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದ ಹೊರಗಡೆ  ಸೋಮವಾರ ಗುಂಡು ಹಾರಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಖಾಲಿದ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

'ಯುನೈಟೆಡ್ ಅಗೇನ್ಸ್ಟ್ ಹೇಟ್' ಎಂಬ ಸಂಘಟನೆ ಆಯೋಜಿಸಿದ್ದ 'ಖೌಫ್ಫ್ ಸೇ ಆಜಾದಿ' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಖಾಲಿದ್ ಅಲ್ಲಿಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.

"ಕಾರ್ಯಕ್ರಮದ ನಿಮಿತ್ತ ಉಮರ್ ಖಾಲಿದ್ ಇಲ್ಲಿಗೆ ಆಗಮಿಸಿದ್ದಾಗ ನಾವು ಟೀ ಸ್ಟಾಲ್ ಒಂದರಲ್ಲಿದ್ದೆವು. ಅಲ್ಲಿಗೆ ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಆಗಮಿಸಿ ಅವರನ್ನು ದೂಡಿ ಅವರತ್ತ ಗುಂಡು ಹಾರಿಸಿದ್ದ. ಖಾಲಿದ್ ಅವರು ನಿಯಂತ್ರಣ ಕಳೆದು ಬಿದ್ದಿದ್ದರಿಂದ ಗುಂಡು ಅವರಿಗೆ ಗುರಿಯಾಗಿಸಿದ್ದರೂ ಅವರಿಗೆ ತಾಗಿರಲಿಲ್ಲ. ಆತನನ್ನು ಹಿಡಿಯಲು ಯತ್ನಿಸಿದರೂ ಆತ ತಪ್ಪಿಸಿಕೊಂಡು ಪರಾರಿಯಾದ,'' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

"ದೇಶದಲ್ಲಿ ಭಯದ ವಾತಾವರಣವಿದೆ. ಸರಕಾರದ ವಿರುದ್ಧ ಮಾತನಾಡುವವರನ್ನು ಬೆದರಿಸಲಾಗುತ್ತದೆ,'' ಎಂದು ಘಟನೆಯ ನಂತರ ಖಾಲಿದ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News