ಬಂತು ಬಂತು ಸ್ವಾತಂತ್ರೋತ್ಸವ ಬಂತು

Update: 2018-08-13 18:34 GMT

ಮಾನ್ಯರೇ,

ಬಂತು ಬಂತು ಸ್ವಾತಂತ್ರೋತ್ಸವ ಬಂತು. ಕೃತ್ರಿಮ ದೇಶಭಕ್ತಿಯ ಮಹಾಪೂರ ಹರಿಸುವ ಸಮಯ ಬಂತು, ವೇದಿಕೆಯಲ್ಲಿ ಮೈಕ್ ಕೈಗೆ ಸಿಕ್ಕ ಕೂಡಲೇ ಸ್ವಾತಂತ್ರ್ಯ ಹೋರಾಟದ ಬಗ್ಗೆ ಘೀಳಿಡುವ ಸಮಯ ಬಂತು.

ನೆಹರೂ ಒಬ್ಬರನ್ನು ತೆಗಳಿ ಬೇರೆಲ್ಲರನ್ನೂ ಹೊಗಳುವ ಸಮಯವಿದು, ಅಲ್ಪಸಂಖ್ಯಾತರಲ್ಲಿ ತಪ್ಪುಹುಡುಕುವ ಸಮಯವಿದು, ಪ್ಲಾಸ್ಟಿಕ್ ಧ್ವಜವನ್ನು ವಾಹನಕ್ಕೆ ಸಿಕ್ಕಿಸಿ ಒಣ ದೇಶಭಕ್ತಿ ತೋರಿಸುವ ಸಮಯವಿದು, ಮುಸ್ಲಿಮರ ಓಣಿಯಲ್ಲಿ ರಾಷ್ಟ್ರಗೀತೆಯನ್ನು ಮರೆತು ಜೋರಾಗಿ ವಂದೇ ಮಾತರಂ ಕಿರುಚುವ ಸಮಯವಿದು, ಕ್ರೈಸ್ತ ಅಧ್ಯಾಪಕ ಚಪ್ಪಲಿ ತೊಟ್ಟು ರಾಷ್ಟ್ರಧ್ವಜ ಹಾರಿಸಿದರೆಂದು ಅವರನ್ನು ಚಚ್ಚುವ ಸಮಯವಿದು, ದೇಶದ ಪ್ರಧಾನಿಯೇ ಬೂಟು ತೊಟ್ಟು ರಾಷ್ಟ್ರಧ್ವಜ ಹಾರಿಸಿದರೂ ಅದು ಸರಿಯೆಂದು ವಿತಂಡ ವಾದಿಸುವ ಸಮಯವಿದು. ಯೋಧರನ್ನು ಕಂಡು ಅಭಿಮಾನದ ನಾಟಕವಾಡುವ ಸಮಯವಿದು. ದೇಶಭಕ್ತರೇ ನಿಮ್ಮ ಮಕ್ಕಳನ್ನೂ ಸೇನಾಪಡೆಗೆ ಸೇರಿಸಿ ಎಂದು ಹೇಳಿದಾಗ ಮಾತ್ರ ನಕಲಿ ದೇಶಭಕ್ತರು ಮಾಯವಾಗುವ ಸಮಯವಿದು.

ನಿಜವಾದ ದೇಶ ಪ್ರೇಮ ಇರುವವರು-ನಿಮ್ಮಲ್ಲಿಯ ಸರಕಾರಿ ನೌಕರರು ರಾಷ್ಟ್ರಧ್ವಜ ಸಾಕ್ಷಿಯಾಗಿಟ್ಟು ಲಂಚ ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡಲಿ, ಬನಿಯಾ ವ್ಯಾಪಾರಿಗಳು ತಾವು ಲಾಭಬಡುಕ ಮತ್ತು ಮೋಸದ ವ್ಯಾಪಾರ ಮಾಡುವುದಿಲ್ಲ ಎಂದು ಪ್ರಮಾಣ ಮಾಡಲಿ, ರಾಜಕಾರಣಿಗಳು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣ ಮಾಡಲಿ, ಧಾರ್ಮಿಕ ನೇತಾರರು ತಾವು ಜಾತಿ ಧರ್ಮದ ಹೆಸರಲ್ಲಿ ಸಮಾಜದಲ್ಲಿ ದ್ವೇಷ ಹರಡುವುದಿಲ್ಲ ಎಂದು ಪ್ರಮಾಣ ಮಾಡಲಿ. ಇದರಿಂದ ಮಾತ್ರ ನಿಮ್ಮ ನೈಜ ದೇಶಪ್ರೇಮ ಸಾಬೀತಾಗುವುದು. ಕೇವಲ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದು ರಾಷ್ಟ್ರಗಾನ ಹಾಡಿದ ಮಾತ್ರಕ್ಕೆ ಯಾರೂ ದೇಶಪ್ರೇಮಿಗಳಾಗುವುದಿಲ್ಲ.

ವೀರಪ್ಪ ಡಿ. ಎನ್., ಮಡಿಕೇರಿ. 

Writer - ವೀರಪ್ಪ ಡಿ. ಎನ್., ಮಡಿಕೇರಿ.

contributor

Editor - ವೀರಪ್ಪ ಡಿ. ಎನ್., ಮಡಿಕೇರಿ.

contributor

Similar News