ಹುದ್ದೆ ಕಳೆದುಕೊಳ್ಳುವ ಭೀತಿ: ಲಿಂಗನಮಕ್ಕಿ ಡ್ಯಾಂಗೆ ಬಾಗಿನ ಅರ್ಪಿಸಲು ರಾಜಕಾರಣಿಗಳ ಹಿಂದೇಟು

Update: 2018-08-16 16:25 GMT

ಶಿವಮೊಗ್ಗ, ಆ. 16: ಏಷ್ಯಾ ಖಂಡದಲ್ಲಿಯೇ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವ ಹೆಗ್ಗಳಿಕೆಯ, ನಾಡಿಗೆ ಬೆಳಕು ನೀಡುವ ಖ್ಯಾತಿಗೆ ಪಾತ್ರವಾಗಿರುವ, ರಾಜ್ಯದ ಅತೀ ದೊಡ್ಡ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯ ಕಳೆದ ಕೆಲ ದಿನಗಳ ಹಿಂದೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಡ್ಯಾಂನಿಂದ ನೀರು ಹೊರಬಿಡಲಾಗುತ್ತಿದೆ.

ಆದರೆ, ಲಿಂಗನಮಕ್ಕಿ ಡ್ಯಾಂಗೆ ಬಾಗಿನ ಅರ್ಪಿಸಿದರೆ ಅಧಿಕಾರದಿಂದ ಕೆಳಗಿಳಿಯುವ ಮೂಢನಂಬಿಕೆಯೊಂದು ಅಧಿಕಾರಸ್ಥ ರಾಜಕಾರಣಿಗಳಲ್ಲಿದೆ. ಈ ಕಾರಣದಿಂದಲೇ ರಾಜಕಾರಣಿಗಳು, ಈ ಡ್ಯಾಂಗೆ ಬಾಗಿನ ಅರ್ಪಿಸಲು ಹಿಂದೆಮುಂದೆ ನೋಡುತ್ತಾರೆ. ಈ ಹಿಂದೆ ಕೆಲ ಮುಖ್ಯಮಂತ್ರಿಗಳು ಲಿಂಗನಮಕ್ಕಿ ಡ್ಯಾಂ ಭರ್ತಿಯಾದರೂ ಬಾಗಿನ ಅರ್ಪಿಸಲು ಆಗಮಿಸಿರಲಿಲ್ಲ ಎಂದು ಗೊತ್ತಾಗಿದೆ.

ಚಾಮರಾಜನಗರಕ್ಕೆ ಕಾಲಿಟ್ಟರೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮಾತಿದೆ. ಅದರಂತೆ ಲಿಂಗನಮಕ್ಕಿ ಡ್ಯಾಂಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿಗಳು, ಇತರೆ ಇಲಾಖೆಯ ಸಚಿವರೂ ಕೂಡ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮಾತು ಕಳೆದ ಕೆಲ ವರ್ಷಗಳಿಂದ ಅಧಿಕಾರಸ್ಥ ರಾಜಕಾರಣಿಗಳ ಮನದಲ್ಲಿ ಬಲವಾಗಿ ಬೇರೂರಿದೆ ಎನ್ನಲಾಗಿದೆ.

ಈ ಮಾತಿಗೆ ಇಂಬು ನೀಡುವಂತೆ, ಲಿಂಗನಮಕ್ಕಿಗೆ ಬಾಗಿನ ಅರ್ಪಿಸಿದ ಹಲವು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರುಗಳು ಅಧಿಕಾರ ಕಳೆದುಕೊಂಡಿದ್ದಾರೆ. ದಿವಂಗತ ಎಸ್. ಬಂಗಾರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಲಿಂಗನಮಕ್ಕಿ ಡ್ಯಾಂಗೆ ಬಾಗಿನ ಅರ್ಪಿಸಿದ ಕೆಲವೇ ತಿಂಗಳುಗಳಲ್ಲಿ ಸಿಎಂ ಹುದ್ದೆಯಿಂದ ಕೆಳಗಿಳಿಯುವಂತಾಗಿತ್ತು. ದಿವಂಗತ ಸಿಎಂ ಧರ್ಮಸಿಂಗ್‍ರವರು ಕೂಡ, ಲಿಂಗನಮಕ್ಕಿಗೆ ಬಾಗಿನ ಅರ್ಪಿಸಿದ ನಂತರ ಸಿಎಂ ಹುದ್ದೆಯಿಂದ ನಿರ್ಗಮಿಸಿದ್ದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕೂಡ ಡ್ಯಾಂಗೆ ಬಾಗಿನ ಅರ್ಪಿಸಿದ್ದರು. ಆದರೆ ಅವರಿಗೆ ಸಿಎಂ ಹುದ್ದೆಯೇ ಕೈ ತಪ್ಪಿ ಹೋಗಿತ್ತು. ಸರ್ಕಾರವೇ ಉರುಳಿತ್ತು. ಇಂಧನ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆಯವರು ಬಾಗಿನ ಅರ್ಪಿಸಿ ಇಂಧನ ಖಾತೆ ಕಳೆದುಕೊಂಡಿದ್ದರು ಎಂದು ರಾಜಕೀಯ ಮುಖಂಡರೊಬ್ಬರು ಹೇಳುತ್ತಾರೆ.

ಈ ಹಿಂದಿನ ಘಟನೆಗಳ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಲಿಂಗನಮಕ್ಕಿ ಜಲಾಶಯ ಭರ್ತಿಯಾದರೂ ಮುಖ್ಯಮಂತ್ರಿ ಸೇರಿದಂತೆ ಇತರೆ ಸಂಬಂಧಿಸಿದ ಇಲಾಖೆಯವರು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಬಾಗಿನ ಅರ್ಪಿಸಲು ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಅನುಮಾನ?: ಪ್ರಸ್ತುತ ವರ್ಷ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. ಮುಖ್ಯಮಂತ್ರಿ ಹುದ್ದೆಯಲ್ಲಿರುವವರು, ಇಂಧನ ಸಚಿವರು ಡ್ಯಾಂಗೆ ಬಾಗಿನ ಅರ್ಪಿಸುವುದು ಸಂಪ್ರದಾಯವಾಗಿದೆ. 'ಡ್ಯಾಂಗೆ ಬಾಗಿನ ಅರ್ಪಿಸಿದವರು ಅಧಿಕಾರ ಕಳೆದುಕೊಳ್ಳತ್ತಾರೆ' ಎಂಬ ಮಾತು ಪ್ರಚಲಿತದಲ್ಲಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಶಿವಕುಮಾರ್ ರವರು ಲಿಂಗನಮಕ್ಕಿ ಡ್ಯಾಂಗೆ ಬಾಗಿನ ಅರ್ಪಿಸಲು ಆಗಮಿಸುತ್ತಾರೆಯೇ? ಇಲ್ಲವೇ? ಎಂಬುವುದೀಗ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಸಾಕಷ್ಟು ಕುತೂಹಲವೂ ಕೆರಳಿಸಿದೆ.

ಏಷ್ಯಾ ಖಂಡದಲ್ಲಿಯೇ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವ ಹೆಗ್ಗಳಿಕೆ

ಸಾಗರ ತಾಲೂಕಿನ ಲಿಂಗನಮಕ್ಕಿ ಗ್ರಾಮದ ಸಮೀಪ 1964 ರಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ನಿರ್ಮಿಸಲಾಯಿತು. 59.13 ಮೀಟರ್ ಎತ್ತರವಾಗಿದ್ದು, 2749 ಮೀ. ಉದ್ದವಾಗಿದೆ. 11 ರೇಡಿಯಲ್ ಗೇಟ್‍ಗಳಿವೆ. 1992 ಚದುರ ಕಿ.ಮೀ.ಗಳಷ್ಟು ಜಲಾನಯನ ಪ್ರದೇಶ ಹೊಂದಿದೆ. 2749 ಘನ ಮೀಟರ್ ನೀರನ್ನು ಶೇಖರಿಸುವ ಸಾಮರ್ಥ್ಯ ಹೊಂದಿದೆ. ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 1819 ಅಡಿಯಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ. ಲಿಂಗನಮಕ್ಕಿ, ಮಹಾತ್ಮಗಾಂಧಿ, ಶರಾವತಿ ಹಾಗೂ ಗೇರುಸೊಪ್ಪ ವಿದ್ಯುತ್ ಕೇಂದ್ರದಲ್ಲಿ ಪ್ರತಿನಿತ್ಯ ಸರಾಸರಿ 20 ರಿಂದ 25 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ.

ಆಣೆಕಟ್ಟೆಯ ಎಡದಂಡೆಯಲ್ಲಿ 27.5 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು 1980 ರಲ್ಲಿ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಿದವು. ಇಲ್ಲಿ ವಿದ್ಯುತ್ ಉತ್ಪಾದನೆಯ ನಂತರ ನೀರನ್ನು ಮಳಲಿ ಸುರಂಗ ಮಾರ್ಗ ಹಾಗೂ ಹೆಚ್ಚುವರಿ ನೀರುವಾಹಕ ವ್ಯವಸ್ಥೆ ಮೂಲಕ, ತಳಕಳಲೆ ಆಣೆಕಟ್ಟನ್ನು ಸೇರುತ್ತದೆ. ತಳಕಳಲೆ ಜಲಾಶಯದಿಂದ ವಡನ್‍ಬೈಲು ಸುರಂಗ ಮಾರ್ಗ, ಸರ್ಜ್ ಟ್ಯಾಂಕ್ ಹಾಗೂ ಕೊಳವೆಗಳ ಮೂಲಕ ಶರಾವತಿ ವಿದ್ಯುದಾಗಾರಕ್ಕೆ ನೀರನ್ನು ಪೂರೈಸಲಾಗುತ್ತದೆ. ಶರಾವತಿ ನದಿಯ ಸ್ವಲ್ಪ ಭಾಗದ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಲು ಜೋಗ ಜಲಪಾತದಿಂದ 1.7 ಕಿ.ಮೀ. ದೂರದಲ್ಲಿ ಮಹಾತ್ಮಗಾಂಧಿ ವಿದ್ಯುತ್ ಕೇಂದ್ರವನ್ನು 1948 ರಲ್ಲಿ ಸ್ಥಾಪಸಲಾಯಿತು. ಒಟ್ಟು 8 ಘಟಕಗಳಿದ್ದು, 139.2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ.

ಶರಾವತಿ ವಿದ್ಯುದಾಗಾರದಲ್ಲಿ ಒಟ್ಟು ಹತ್ತು ಘಟಕಗಳಿದ್ದು, 1035 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು, ಗೇರುಸೊಪ್ಪ ಅಣೆಕಟ್ಟೆಯಲ್ಲಿ ಸಂಗ್ರಹಿಸಲಾಗುತ್ತದೆ. ಈ ಆಣೆಕಟ್ಟೆಯ ಬಲದಂಡೆಯಲ್ಲಿ ನಾಲ್ಕು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. 240 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಗೇರುಸೊಪ್ಪದಿಂದ ಬಿಡುಗಡೆಯಾದ ನೀರು ಹೊನ್ನಾವರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯಲ್ಲಿ ಹಲವು ಹಂತಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಪೂರೈಕೆ ಮಾಡಲಾಗುತ್ತದೆ.

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News