ಪ್ರಪಂಚಕ್ಕೆ ಭಾರತವನ್ನು ಪರಿಚಯಿಸಿದ ಮಹಾನ್ ವ್ಯಕ್ತಿ ವಾಜಪೇಯಿ: ಜನಸಂಘದ ಹಿರಿಯ ಮುಖಂಡ ಮಂಜಪ್ಪ

Update: 2018-08-17 18:43 GMT

ಸೊರಬ,ಆ.17: ವಸ್ತುನಿಷ್ಠ ಆಡಳಿತ ನಡೆಸಿ ಪ್ರಪಂಚಕ್ಕೆ ಭಾರತವನ್ನು ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ವಾಜಪೇಯಿ. ದೇಶ ಕಂಡ ಅಪ್ರತಿಮ ರಾಜಕಾರಣಿಯಾಗಿದ್ದು, ಭಾರತ ದೇಶವನ್ನು ಉತ್ತುಂಗಕ್ಕೆ ಹೊಯ್ದ ಮಹನೀಯರಾಗಿದ್ದಾರೆ ಎಂದು ಜನಸಂಘದ ಹಿರಿಯ ಮುಖಂಡ ಹೆಚ್.ಎಸ್. ಮಂಜಪ್ಪ ತಿಳಿಸಿದರು.

ಪಟ್ಟಣದ ರಂಗಮಂದಿರದಲ್ಲಿ ಶುಕ್ರವಾರ ಶಾಂತಿಧೂತ, ಪತ್ರಕರ್ತ, ಕವಿಹೃದಯ, ಅಜಾತಶತೃ ಭಾರತರತ್ನ ಎ.ಬಿ ವಾಜಪೇಯಿ ಅವರಿಗೆ ಹಮ್ಮಿಕೊಂಡಿದ್ದ ನಿಮಗಿದೋ ನಮ್ಮ ಅಂತಿಮ ನಮನ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ವಾಜಪೇಯಿ ಅವರ ನಿಧನದಿಂದಾಗಿ ದೇಶ ಕತ್ತಲಲ್ಲಿ ಮುಳುಗಿದಂತಾಗಿದೆ. ಅವರು 1962 ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ್ದ ಅವರು ಶಿವಮೊಗ್ಗ ಜಿಲ್ಲೆಗೆ 7 ಬಾರಿ ಭೇಟಿ ನೀಡಿದ್ದರು. 1964 ರಲ್ಲಿ ಕಲ್ಲಿಕೋಟೆಯಲ್ಲಿ ನಡೆದ ಸಮ್ಮೇಳನದಲ್ಲಿ ಅಡ್ವಣಿ ಮತ್ತು ಆಟಲ್ ಬಿಹಾರಿ ವಾಜಪೇಯಿಯವರು ಸ್ವತಃ ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಊಟ ಬಡಿಸಿದ್ದರು. ಅಷ್ಟೊಂದು ಸರಳ ಹೃದಯವಂತರಾಗಿದ್ದ ಅವರು ವಿದೇಶಾಂಗ ಸಚಿವರಾಗಿದ್ದಾಗಲೂ ಕಾರ್ಯಕರ್ತರ ಮನೆಯಲ್ಲಿ ಉಳಿಯುತ್ತಿದ್ದರು. ಅವರ ಸಂಘಟನಾ ಶಕ್ತಿಯಿಂದ ಯುವಜನತೆಗೆ ರಾಷ್ಟ್ರಭಕ್ತಿ ಮೂಡಿದಂತೆ ಮಾಡಿದವರು ಅವರಾಗಿದ್ದರು. ತಮಗಾಗಿ ಏನನ್ನೂ ಬಯಸದ ವಾಜಪೇಯಿ ದೇಶದ ಅಭಿವೃದ್ಧಿಗಾಗಿ ಹಗಲಿರುಳು ದುಡಿದ ಮಹಾನ್ ಚೇತನ. ಅವರು ಅಜರಾಮರರಾಗಲಿ ಎಂದರು.

ಹಿರಿಯ ಚಿಂತಕ ತಿಮ್ಮಣ್ಣಾಚಾರ್ ಮಾತನಾಡಿ, ದೇಶಕಂಡ ಅಪ್ರತಿಮ ರಾಜಕಾರಣಿ ವಾಜಪೇಯಿಯವರ ವೈಯುಕ್ತಿಕ ನಡವಳಿಕೆ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಿದೆ. ಸ್ವಸಾಮರ್ಥ್ಯದಿಂದ ಮುಂದಾಳತ್ವ ವಹಿಸಿದ ದೇಶಕಂಡ ಅತ್ಯುತ್ತಮ ಪ್ರಧಾನಿಯಾಗಿದ್ದರು. ತರುಣರಲ್ಲಿ ಅಳಿಸಲಾಗದ ಪ್ರಭಾವ ಮೂಡಿಸುವ ವಾಕ್ಚಾತುರ್ಯ ಹೊಂದಿದ ಸ್ಥಿತಪ್ರಜ್ಞ ರಾಷ್ಟ್ರಾಭಿಮಾನವನ್ನು ಪ್ರತಿಯೊಬ್ಬರಲ್ಲೂ ತುಂಬಿ ಭಾರತದ ನವನಿರ್ಮಾಣದ ಅಡಿಪಾಯಕ್ಕೆ ಕಾರಣಕರ್ತರಾದವರು ಎಂದರು. 

ಶಾಸಕ ಕುಮಾರ್ ಬಂಗಾರಪ್ಪ ಶ್ರದ್ಧಾಂಜಲಿ ಸಲ್ಲಿಸಿ, ದೇಶದ ಚೇತನರಾಗಿದ್ದ ಅವರು ಬಿಜೆಪಿ ಪಕ್ಷದ ಮೊದಲ ಅಧ್ಯಕ್ಷರಾಗಿದ್ದರು. ರಾಜಧರ್ಮ ಸೇವಾ ಮನೋಭಾವನೆಯನ್ನು ಇಟ್ಟುಕೊಂಡಂತಹ ಆದರ್ಶ ರಾಜಕಾರಣಿ ಅವರಾಗಿದ್ದರು. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ತಾವು ಸಣ್ಣ ನೀರಾವರಿ ಸಚಿವರಾಗಿದ್ದು, ನೀರಾವರಿಗಾಗಿ ಸಾವಿರ ಕೋಟಿ ರೂ. ಅನುದಾನ ಕೇಳಿಕೊಂಡಾಗ ತಕ್ಷಣವೇ ಕೊಟ್ಟಂತಹ ಪಕ್ಷಪಾತ ತೋರದಂತಹ ಪ್ರಧಾನಿ ಅವರಾಗಿದ್ದರು ಎಂದರು. ಪ್ರಭಾಕರ ರಾಯ್ಕರ್, ಈಶ್ವರ ಚನ್ನಪಟ್ಟಣ, ಎಂ.ಆರ್. ಪಾಟೀಲ್, ಗಜಾನನರಾವ್ ಉಳವಿ, ಗೀತಾ ಮಲ್ಲಿಕಾರ್ಜುನ, ಎ.ಎಲ್. ಅರವಿಂದ, ಮಧುಕೇಶ್ವರ ಸೇರಿದಂತೆ ಹಲವರು ಮಾತನಾಡಿದರು.

ಬಿಜೆಪಿ ಅಧ್ಯಕ್ಷ ಎ.ಎಲ್. ಅರವಿಂದ್, ದಿವಾಕರ ಭಾವೆ, ಎಂ.ಆರ್ ಪಾಟೀಲ್, ಶ್ರೀಪಾದ ಹೆಗಡೆ, ಗುರುಪ್ರಸನ್ನಗೌಡ, , ಶಿವಯೋಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News