ಮಡಿಕೇರಿ : ಮಳೆಹಾನಿ ಸಂತ್ರಸ್ತರಿಗೆ ನೆರವಿನ ಮಹಾಪೂರ

Update: 2018-08-19 15:02 GMT

ಮಡಿಕೇರಿ,ಆ.19 : ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಕೊಡಗಿನ ಜನತೆಗೆ ರಾಜ್ಯ ಹಾಗೂ ರಾಷ್ಟ್ರದ ವಿವಿಧ ಭಾಗಗಗಳಿಂದ ದಿನಬಳಕೆ ಸಾಮಾಗ್ರಿಗಳು, ಬಟ್ಟೆ ಹಾಗೂ ಹೊದಿಕೆಗಳ ರೂಪದಲ್ಲಿ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಆದರೆ ಈ ರೀತಿ ಬರುತ್ತಿರುವ ದಿನಬಳಕೆ ಸಾಮಾಗ್ರಿಗಳ ಬಳಕೆಯ ಅವಧಿ ಸೀಮಿತವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಂತಹ ಸಾಮಾಗ್ರಿಗಳು ಬಂದಲ್ಲಿ ಅವುಗಳನ್ನು ಸಂರಕ್ಷಿಸಿಡುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ದಾನಿಗಳು, ಸಂಘಸಂಸ್ಥೆಗಳು ಸೀಮಿತ ಅವಧಿಯೊಳಗೆ ಬಳಕೆ ಮಾಡಿಕೊಳ್ಳಬಹುದಾದ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ತಯಾರಿಸಿದ ಆಹಾರ ಪದಾರ್ಥಗಳನ್ನು ಸದ್ಯದ ಮಟ್ಟಿಗೆ ಕಳುಹಿಸಿಕೊಡದಿರುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಇಂತಹ ವಸ್ತುಗಳು ಈಗಾಗಲೇ ಪುನರ್ವಸತಿ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಇವುಗಳು ಬೇಗನೇ ಹಾಳಾಗುವುದರಿಂದ ದಾನಿಗಳು ಈ ಮನವಿಯನ್ನು ಪರಿಗಣಿಸುವಂತೆ ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ. ಜಿ.ಎಲ್ ಪ್ರವೀಣ್‍ಕುಮಾರ್ ಕೋರಿದ್ದಾರೆ. ಅಲ್ಲದೆ ದಾನಿಗಳ ಮಾನವೀಯತೆಯ ಮಹಾಪೂರಕ್ಕೆ ಜಿಲ್ಲಾಡಳಿತದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ಥರಿಗೆ ಸಹಾಯ ಮಾಡಲು ಇಚ್ಛಿಸುವ ಸ್ವಯಂಸೇವಾ ಸಂಸ್ಥೆಗಳು, ಸಾರ್ವಜನಿಕರು, ಉದ್ದಿಮೆದಾರರು, ಜಿಲ್ಲಾಡಳಿತ ಭವನದ ಕೆಳ ಮಹಡಿಯಲ್ಲಿ ಮತ್ತು ಕೃಷಿ ಉತ್ಪನ್ ಮಾರುಕಟ್ಟೆಯ ಗೋದಾಮಿನಲ್ಲಿ ತೆರದಿರುವ ಸಂಗ್ರಹಣಾ ಕೇಂದ್ರಕ್ಕೆ ಸಾಮಾಗ್ರಿಗಳನ್ನು ನೀಡಬಹುದೆಂದೂ ಅವರು ತಿಳಿಸಿದ್ದಾರೆ.

ಈ ಕುರಿತ ಮಾಹಿತಿಗಾಗಿ 8105204059 (ಬಸವರಾಜು), 9972995353(ಶ್ರೀಶ) ಹಾಗೂ 9008167912(ಮಲ್ಲೇಶ) ಅವರುಗಳನ್ನು ಸಂಪರ್ಕಿಸಬಹುದೆಂದು ಅವರು  ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ಥರಾದವರಿಗೆ ಸಹಾಯ ಮಾಡಲಿಚ್ಛಿಸುವ ಸಾರ್ವಜನಿಕರ, ಸಂಘ ಸಂಸ್ಥೆಗಳು, ಉದ್ದಿಮೆದಾರರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಜಮಾ ಮಾಡುವಂತೆಯೂ ಅವರು ಕೋರಿದ್ದಾರೆ.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ತಾಲೂಕಿನ ಹಲವು ಗ್ರಾಮಗಳು ಸಂಪೂರ್ಣ ನಿರ್ಜನಗೊಂಡಿದ್ದು, ಸಂತ್ರಸ್ಥರ ನೆರವಿಗಾಗಿ ಸರಕಾರದ ಜೊತೆಗೆ ವಿವಿಧ ಸಂಘಸಂಸ್ಥೆಗಳೂ ಕೈಜೊಡಿಸಿವೆ.

ಮಡಿಕೇರಿ ತಾಲೂಕಿನ ಮಕ್ಕಂದೂರು, ತಂತಿಪಾಲ, ಹೆಮ್ಮೆತ್ತಾಳು ಮುಂತಾದ ಪ್ರದೇಶಗಳಲ್ಲಿ ನಡುಗಡ್ಡೆಗಳಲ್ಲಿ ಸಿಲುಕಿದ್ದ ನೂರಾರು ಮಂದಿಯನ್ನು ರಕ್ಷಿಸುವಲ್ಲಿ ಸಂಘಟನೆಗಳು ಯಶಸ್ವಿಯಾಗಿದ್ದು, ಕಳೆದ ಮೂರು ದಿನಗಳಿಂದ ರಾತ್ರಿ ಹಗಲೆನ್ನದೆ ಸಂತ್ರಸ್ಥರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜಿಲ್ಲಾಡಳಿತ ನಿರಾಶ್ರಿತ ಪರಿಹಾರ ಕೇಂದ್ರಗಳನ್ನು ತೆರಯುವ ಮುನ್ನವೇ ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪ, ಓಂಕಾರ ಸದನ, ಜನರಲ್ ತಿಮ್ಮಯ್ಯ ಶಾಲೆ, ಕೊಡವ ಸಮಾಜ, ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪ ಮುಂತಾದೆಡೆ ಗಂಜಿ ಕೇಂದ್ರಗಳನ್ನು ತೆರೆಯುವ ಮೂಲಕ ನೊಂದವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕೇಂದ್ರಗಳಲ್ಲಿ ಸುಮಾರು 800ಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಿದ್ದಾರೆ. ಇವರೊಂದಿಗೆ ರೋಟರಿ, ಲಯನ್ಸ್ ನಂತಹ ಸೇವಾ ಸಂಸ್ಥೆಗಳು, ವೈದ್ಯರ ತಂಡ, ಔಷಧಿ ವ್ಯಾಪಾರಿಗಳ ಸಂಘ ಮತ್ತಿತರ ಸಂಘಸಂಸ್ಥೆಗಳೂ ಕೈಜೋಡಿಸಿವೆ.

ಬಟ್ಟೆಗಿಂತ ವಸ್ತುಗಳ ಅಗತ್ಯವಿದೆ
ನಗರದಲ್ಲಿರುವ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಸಾಕಾಗುವಷ್ಟು ಬಟ್ಟೆಬರೆಗಳು ಸಂಗ್ರಹವಾಗಿದ್ದು, ಅಲ್ಲಿರುವವರಿಗೆ ಉಡುವ ಬಟ್ಟೆಗಳಿಗಿಂತಲೂ, ಚಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯವಿರುವ ಕಂಬಳಿ, ಬೆಡ್‍ಶೀಟ್, ಸ್ವೆಟರ್, ಜರ್ಕಿನ್ ಮುಂತಾದ ವಸ್ತುಗಳ ಅಗತ್ಯವಿದೆ.

ಮಕ್ಕಂದೂರು, ಹಾಲೇರಿ ಮುಂತಾದ ಕಡೆಗಳಲ್ಲಿ ಕಾಫಿ ತೋಟಗಳ ನಡುವೆ ಸಿಲುಕಿಕೊಂಡಿದ್ದ ಕಾರ್ಮಿಕರು ಮತ್ತಿತರರನ್ನು ಸಂತ್ರಸ್ಥರ ಕೇಂದ್ರಕ್ಕೆ ಕರೆ ತರುತ್ತಿದ್ದ ದೃಶ್ಯ ಕಂಡು ಬಂದಿತು.

ಕಾರ್ಮಿಕರಾಗಿ ಅಸ್ಸಾಂನಿಂದ ಬಂದಿದ್ದ ಹಲವು ಕುಟುಂಬಗಳೂ ಇವರಲ್ಲಿ ಸೇರಿದ್ದು, ಮಕ್ಕಳು, ಮಹಿಳೆಯರು, ಪುರುಷರು ಉಟ್ಟ ಬಟ್ಟೆಯಲ್ಲೇ 2-3 ದಿನಗಳಿಂದ ಕಾಫಿ ತೋಟಗಳ ನಡುವೆ ಆಹಾರವಿಲ್ಲದೆ, ಚಳಿಯಿಂದ ನಡುಗುತ್ತಿದ್ದವರನ್ನು ಕರೆತಂದು ಸಂಸತ್ರಸ್ಥರ ಕೇಂದ್ರಕ್ಕೆ ಸೇರಿಸಿದ್ದಾರೆ.

ಅಗತ್ಯವಿರುವವರಿಗೆ ದಾನಿಗಳು ನೀಡಿದ ಬಟ್ಟೆಬರೆಗಳನ್ನು ಒದಗಿಸಲಾಗುತ್ತಿದೆ. ಅನಾರೋಗ್ಯಕ್ಕೆ ಒಳಗಾದವರಿಗೆ ತುರ್ತು ವೈದ್ಯಕೀಯ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ನಗರದ ಜಿಲ್ಲಾಸ್ಪತ್ರೆ, ಅಶ್ವಿನಿ ಆಸ್ಪತ್ರೆ ಮತ್ತಿತರರ ಚಿಕಿತ್ಸಾ ಕೇಂದ್ರಗಳಲ್ಲಿ  ಸಂತ್ರಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಔಷಧಿಯ ಅಗತ್ಯ ಕಂಡು ಬಂದಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಇತರೆಡೆಗಳಿಂದ ತರಿಸಿಕೊಡುತ್ತಿದ್ದಾರೆ.

ಯಾವುದೇ ಪ್ರಚಾರ, ಪ್ರತಿಫಲಾಪೇಕ್ಷೆ ಇಲ್ಲದೆ ಜಾತಿ, ಮತ, ಭೇದವಿಲ್ಲದೆ ಕಾರ್ಯಕರ್ತರು ಹಗಲು, ಇರುಳು, ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೆ ಸಂತ್ರಸ್ಥರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News