ಪೌರಾಣಿಕ ನದಿಯ ಶೋಧದ ಹಿಂದಿನ ತರ್ಕವನ್ನು ಹುಡುಕಲು ‘ಸರ್ಚಿಂಗ್ ಫಾರ್ ಸರಸ್ವತಿ’ಯ ಯತ್ನ

Update: 2018-08-20 16:22 GMT

ಹೊಸದಿಲ್ಲಿ,ಆ.20: ತನ್ನ ಸಾಕ್ಷಚಿತ್ರವು ಈಗಿರುವ ನದಿಗಳೇ ಸಾಯುವ ಸ್ಥಿತಿಯಲ್ಲಿರುವಾಗ ಪೌರಾಣಿಕ ನದಿಯೊಂದನ್ನು ಹುಡುಕಲು ಸರಕಾರವು 50 ಕೋ.ರೂ.ಗಳನ್ನು ವ್ಯಯಿಸಲು ಹೊರಟಿರುವ ನಮ್ಮ ಇಂದಿನ ದಿನಗಳ ರೂಪಕವಾಗಿದೆ ಎಂದು ‘ಸರ್ಚಿಂಗ್ ಫಾರ್ ಸರಸ್ವತಿ(ಸರಸ್ವತಿಗಾಗಿ ಶೋಧ)’ಯ ನಿರ್ದೇಶಕ ಅಮಿತ್ ಮಧೇಸಿಯಾ ಹೇಳಿದ್ದಾರೆ.

ಅದು ಕಾಂಗ್ರೆಸ್ ಅಥವಾ ಬಿಜೆಪಿ ಆಗಿರಲಿ,ಸರಕಾರಗಳು ಸಾವಿರಾರು ವರ್ಷಗಳ ಹಿಂದೆ ಕಣ್ಮರೆಯಾಗಿದೆ ಎನ್ನಲಾಗಿರುವ ಸರಸ್ವತಿಯನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಲೇ ಇವೆ ಎಂದು ಹೇಳಿದ ಅವರು,ತಾನು ಮತ್ತು ತನ್ನ ಸಹ ನಿರ್ದೇಶಕಿ ಶಿರ್ಲೆ ಅಬ್ರಹಾಂ ಕೆಲವು ಸಮಯ ಈ ಕಥೆಯ ಹಿಂದೆಯೇ ಬಿದ್ದಿದ್ದೆವು. 2015ರಲ್ಲಿ ಹರ್ಯಾಣದ ಯಮುನಾ ನಗರ ಜಿಲ್ಲೆಯ ಮುಗಲ್ವಾಲಿ ಗ್ರಾಮದಲ್ಲಿ ಸರಸ್ವತಿ ನದಿಯು ಪತ್ತೆಯಾಗಿದೆ ಎಂಬ ವರದಿಯನ್ನು ಓದಿದಾಗ ತಮ್ಮ ಕುತೂಹಲ ಅಸಮಾಧಾನಕ್ಕೆ ಬದಲಾಗಿತ್ತು ಎಂದರು. ಇದರ ಫಲಿತಾಂಶವೇ 20 ನಿಮಿಷಗಳ ‘ಸರ್ಚಿಂಗ್ ಫಾರ್ ಸರಸ್ವತಿ’ ಆಗಿದೆ ಎಂದು ತಿಳಿಸಿದರು.

ನ್ಯೂಯಾರ್ಕ್ ಟೈಮ್ಸ್ ತನ್ನ ಒಪಿ-ಡಾಕ್ಸ್ ವಿಭಾಗದಲ್ಲಿ ಈ ಸಾಕ್ಷಚಿತ್ರವನ್ನು ಬಿಡುಗಡೆಗೊಳಿಸಿದೆ.

ಚಿತ್ರವು ನಮ್ಮ ಕಾಲದ ರೂಪಕವಾಗಿದೆ. ನಾವೂ ಕೇವಲ ಊಹಿಸಬಹುದಾದ ವಿಷಯಗಳನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಮಹಾನ್ ಜನರು,ಭಾರತೀಯರು ಮತ್ತು ಹಿಂದುಗಳು ಮಹಾನ್ ಜನರು ಎಂದು ಹೇಳಿಕೊಳ್ಳಲು ನಾವು ಇವುಗಳಿಗೆ ಜೀವ ನೀಡಲು ಪ್ರಯತ್ನಿಸುತ್ತಿದ್ದೇವೆ. ಹಾಗೆ ಹೇಳುವುದು ನಮಗೆ ಸಮಸ್ಯೆಯಾಗಬಾರದು,ಆದರೆ ಅದಕ್ಕಾಗಿ ನಾವು ವಿನೂತನವಾದವುಗಳನ್ನು ಸಾಧಿಸಬೇಕು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಮಧೇಸಿಯಾ,ಬ್ರಹ್ಮಾಂಡದ ನಿಗೂಢತೆಯನ್ನು ಅನ್ವೇಷಿಸಲು ವೈಜ್ಞಾನಿಕ ಪ್ರಗತಿ ಮತ್ತು ಪ್ರಯತ್ನಗಳಾಗಬೇಕು ಎಂದು ಹೇಳಿದರು.

ಕಲಿಯಲು ಬೇಕಾದಷ್ಟು ವಿಷಯಗಳಿವೆ. ಆದರೆ ನಾವು ನದಿಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಜನರಿಗೇನು ಲಾಭವಿದೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸಿದ್ದೇವೆ ಎಂದ ಅವರು,ಹಾಲಿ ಇರುವ ನದಿಗಳೇ ಸಾಯುತ್ತಿರುವಾಗ ಪುರಾಣ ಕಾಲದ ನದಿಯನ್ನು ಯಾರು ಹುಡುಕುತ್ತಾರೆ ಎಂದು ಪ್ರಶ್ನಿಸಿದರು.

ತನ್ನ ಚಿತ್ರವು ಜನರ ನಂಬಿಕೆಯನ್ನು ಪ್ರಶ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದರೆ ತೆರಿಗೆದಾರರ ಹಣವನ್ನು ಇಂತಹ ಯೋಜನೆಗಾಗಿ ಪೋಲು ಮಾಡುತ್ತಿರುವುದು ತರ್ಕಕ್ಕೆ ನಿಲುಕುತ್ತಿಲ್ಲ ಎಂದರು.

ಸರಕಾರದ ಕ್ರಮಗಳನ್ನು ಪ್ರಶ್ನಿಸಿದ ಅವರು,ರಾಷ್ಟ್ರವಾದದ ವ್ಯಾಪಕ ವಿಷಯಗಳು ಈ ನದಿ ಶೋಧದ ಹಿಂದಿನ ಉದ್ದೇಶವಾಗಿರುವಂತಿದೆ ಎಂದರು.

ನಮ್ಮ ಭೂಮಿಯು 4.6 ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ. ನದಿಗಳು ಬರುತ್ತವೆ ಮತ್ತು ಹೋಗುತ್ತವೆ ಮತ್ತು ಆ ನದಿ ಕಳೆದುಹೋಗಿರಬಹುದು. ಆದರೆ ಈಗ ನೆಲದಡಿಯಿಂದ ನೀರನ್ನು ತೆಗೆದು ನದಿಯನ್ನು ಪತ್ತೆ ಹಚ್ಚಿದ್ದೇವೆ ಎಂದು ಹೇಳಿದರೆ ಪುರಾಣವನ್ನು ವಾಸ್ತವದೊಂದಿಗೆ ಸಮನ್ವಯಿಸುವುದರಿಂದ ಅದು ಸಮಸ್ಯಾತ್ಮಕವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News