ಚಿಕ್ಕಮಗಳೂರು: ತಗ್ಗಿದ ಮಳೆ; ಮಲೆನಾಡಿನ ಅಲ್ಲಲ್ಲಿ ಭೂ ಕುಸಿತ

Update: 2018-08-20 16:51 GMT

ಚಿಕ್ಕಮಗಳೂರು, ಆ.20: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೋಮವಾರ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ಆಗಾಗ್ಗೆ ಸಾಧಾರಣ ಮಳೆಯಾಗಿದೆ. ಸತತ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿನ ಜನತೆ ಮಳೆ ವಿರಾಮ ನೀಡಿರುವುದರಿಂದ ನಿರಾಳರಾಗಿದ್ದಾರೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಹೇಮಾವತಿ, ತುಂಗಾ, ಭದ್ರಾನದಿಗಳಲ್ಲಿ ನೀರಿನ ಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಮಳೆ ಕಡಿಮೆಯಾಗಿದ್ದರೂ ಮಲೆನಾಡಿನ ಅಲ್ಲಲ್ಲಿ ಭೂ ಕುಸಿತದಂತಹ ಹಾನಿಗಳು ಮುಂದುವರಿದಿವೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೋಸಿ ಹೋಗಿದ್ದ ಮಲೆನಾಡಿನ ಜನತೆ ಕಳೆದ ಶನಿವಾರದಿಂದ ವರುಣಾರ್ಭಟ ಕೊಂಚ ಕಡಿಮೆಯಾಗಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಶನಿವಾರ ಮಳೆ ಕಡಿಮೆಯಾಗಿ ಬಿಸಿಲು ಕಂಡಿದ್ದ ಮಲೆನಾಡಿನ ಜನತೆಗೆ ರವಿವಾರ ದಿಢೀರ್ ಸುರಿದ ಧಾರಾಕಾರ ಮಳೆಯಿಂದಾಗಿ ನಿರಾಶರಾಗಿದ್ದರು. ಆದರೆ ಸೋಮವಾರ ಬೆಳಗಿನಿಂದಲೇ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕೆಲವೆಡೆ ಬಿಸಿಲಿನ ವಾತಾವರಣ ಇತ್ತಾದರೂ ಮಲೆನಾಡಿನ ಅಲ್ಲಲ್ಲಿ ಆಗಾಗ್ಗೆ ಸಾಧಾರಣ ಮಳೆ ಸುರಿಯಿತು.

ಸೋಮವಾರ ಮಲೆನಾಡು ಭಾಗದ ಮೂಡಿಗೆರೆ ತಾಲೂಕಿನ ಅಲ್ಲಲ್ಲಿ ಆಗಾಗ್ಗೆ ಉತ್ತಮ ಮಳೆಯಾಗಿದೆ. ಮಳೆ ಕಡಿಯಾದರು ಭೂ ಕುಸಿತದಂತಹ ಹಾನಿಗಳು ಇನ್ನೂ ಮುಂದುವರಿದಿವೆ. ಸೋಮವಾರ ಮಳೆ ಕಡಿಮೆಯಾದರೂ ಮಳೆಯಿಂದ ಅನೇಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮಲೆನಾಡಿನ ಗ್ರಾಮೀಣ ಭಾಗಗಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೇ ಆಡುತ್ತಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಹುಲುಗಾರುಬೈಲು ಗ್ರಾಮದಲ್ಲಿ ಗುಡ್ಡ ಕುಸಿದು ಮಣ್ಣು ಭತ್ತದ ಗದ್ದೆಗೆ ಬಿದ್ದಿರುವುದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕೊಪ್ಪ ತಾಲೂಕಿನ ಬಂಡಿಗಡಿ ಸಮೀಪ ಈಚಲಬೈಲು ಗ್ರಾಮದಲ್ಲಿ ಭೂಕುಸಿತ ಉಂಟಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಮತ್ತು ನಾಲ್ಕು ಕಂಬಗಳು ಧರೆಗುರುಳಿವೆ. ಗ್ರಾಮದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಜನರು ಪರದಾಡುವಂತಾಗಿದೆ.

ಚಿಕ್ಕಮಗಳೂರು ತಾಲೂಕು ಪರ್ವತ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಸೋಮವಾರ ಮಧ್ಯಾಹ್ನ ಭಾರಿ ಗಾತ್ರದ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಮೂಡಿಗೆರೆ ತಾಲೂಕಿನ ಹಳೇ ಮೂಡಿಗೆರೆಯಲ್ಲಿ ರವಿವಾರ ರಾತ್ರಿ ಸುರಿದ ಮಳೆ, ಗಾಳಿಗೆ ಧೂಮಪ್ಪಶೆಟ್ಟಿ ಎಂಬವವರ ಮನೆ ಭಾಗಶಃ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.

ಮಳೆ ವಿವರ: ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೂ ವಾಡಿಕೆಗಿಂತ ಶೇ.83.2 ರಷ್ಟು ಹೆಚ್ಚು ಮಳೆಯಾಗಿದೆ. ಪ್ರಸ್ತುತ ಸಾಲಿನ ಆ.20ರವರೆಗೆ ವಾಡಿಕೆಯಂತೆ ಜಿಲ್ಲೆಯಲ್ಲಿ 9365 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 17153.9 ಮಿ.ಮೀ. ಮಳೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News