ಕೊಡಗು ಮಳೆಹಾನಿ: ರಸ್ತೆ ಸಂಪರ್ಕಕ್ಕೆ 12 ಕೋಟಿ ರೂ. ಬಿಡುಗಡೆ; ಸಚಿವ ಕೃಷ್ಣಬೈರೇಗೌಡ

Update: 2018-08-23 18:55 GMT

ಮಡಿಕೇರಿ, ಆ.23: ಪ್ರಕೃತಿ ವಿಕೋಪ ನಿಧಿಯಡಿ ಕೊಡಗು ಜಿಲ್ಲೆಗೆ 12 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ಆದ್ಯತೆ ಮೇರೆಗೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯಲ್ಲಿ 4500 ಕಿ.ಮೀ.ಗಳಷ್ಟು ಗ್ರಾಮೀಣ ರಸ್ತೆಗಳು ಹಾಳಾಗಿವೆ ಎಂದು ಹೇಳಿದ್ದಾರೆ. ಮುಕ್ಕೋಡ್ಲು, ಮಕ್ಕಂದೂರು, ದೇವಸ್ತೂರು, ಗಾಳಿಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ಪ್ರಾಣಹಾನಿ ಜತೆಗೆ ಭಾರೀ ಪ್ರಮಾಣದಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕೊಡಗಿನಲ್ಲಿ 4500 ಕಿ.ಮೀ. ರಸ್ತೆ ದುರಸ್ತಿಗೊಳಗಾಗಿದ್ದು, ಹಲವು ಗ್ರಾಮಗಳಿಗೆ ರಸ್ತೆಯನ್ನೇ ನಿರ್ಮಿಸಲು ಅಸಾಧ್ಯವಾದ ಪರಿಸ್ಥಿತಿಯಿದೆ ಎಂದು ಹೇಳಿದರು. 250 ಕಿ.ಮೀ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇವುಗಳನ್ನು ಹೊಸ ರಸ್ತೆಯಂತೆಯೇ ನಿರ್ಮಿಸಬೇಕಾಗಿದೆ ಎಂದು ಹೇಳಿದ ಕೃಷ್ಣಬೈರೇಗೌಡ, ಮುಕ್ಕೋಡ್ಲು, ದೇವಸ್ತೂರು ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸುವುದೇ ಅಸಾಧ್ಯ ಎಂದು ಹೇಳಿದರು.

ಕೃಷ್ಣ ಬೈರೇಗೌಡ, ತಮ್ಮ ಇಲಾಖೆಯಿಂದ ಕೊಡಗಿನ ರಸ್ತೆಗಳ ದುರಸ್ಥಿಗೆ ಎಲ್ಲಾ ರೀತಿಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಬದ್ದನಾಗಿದ್ದೇನೆ ಎಂದು ಭರವಸೆ ನೀಡಿದರು. 

ರಸ್ತೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸಮಾರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಸಚಿವ ಕೃಷ್ಣಬೈರೇಗೌಡ, ಪಕ್ಕದ ಜಿಲ್ಲೆಗಳಿಂದ ಸಾಕಷ್ಟು ಸಿಬ್ಬಂದಿಗಳನ್ನು ಕೊಡಗಿಗೆ ನಿಯೋಜಿಸಲಾಗಿದ್ದು, ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯಲಿದೆ ಎಂದರು. ರಸ್ತೆ ಸಂಪರ್ಕವೇ ಅಸಾಧ್ಯ ಎಂಬಂತಿರುವ ಗ್ರಾಮಗಳಿಗೆ ಬೇರೆ ಮಾರ್ಗಗಳಿಂದ ಹೊಸ ರಸ್ತೆ ನಿರ್ಮಿಸಲೂ ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಅತೀಕ್, ಜಿಲ್ಲಾಧಿಕಾರಿ ಶ್ರೀವಿದ್ಯಾ,  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News