ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 6 ಮಂದಿ ಮೃತ್ಯು
ಬೆಂಗಳೂರು, ಆ.24: ಮದುವೆ ದಿಬ್ಬಣದ ವಾಹನಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 6 ಜನ ಸದಸ್ಯರು ಮೃತಪಟ್ಟಿರುವ ಘಟನೆ ಇಲ್ಲಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಗೊಂಡ ಗ್ರಾಮದ ಸತ್ತಾಪುರದಲ್ಲಿ ನಡೆದಿದೆ.
ಗೋಪಾಲ್ ರೆಡ್ಡಿ (60), ರವೀಂದ್ರರೆಡ್ಡಿ (40), ಕೆ.ವೆಂಕಟಸ್ವಾಮಿ (65), ಒಡ್ಡಿ ಆಂಜನೇಯಲು (35), ಗೊಲ್ಲ ಆಂಜನೇಯಲು (35), ವೆಂಕಟಪ್ಪ(50) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ. ವೈಎಸ್ಆರ್ ಪಕ್ಷದ ಮುಖಂಡರಾದ ಶ್ರೀಧರ ನಾರಾಯಣ ಎಂಬವರ ಪುತ್ರನ ಮದುವೆ ಕಾರ್ಯಕ್ರಮಕ್ಕೆ ಅನಂತಪುರಕ್ಕೆ ಜೀಪ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಧರ್ಮಾವರಂನಿಂದ ಬಾಳೆಹಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದರೆ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೆನುಗೊಂಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿದುಬಂದಿದೆ.