ರಕ್ಷಣಾ ಸಚಿವೆ ವಿರುದ್ಧ ಕೊಡಗಿನ ಜನಪ್ರತಿನಿಧಿಗಳ ಅಸಮಾಧಾನ

Update: 2018-08-24 15:02 GMT

ಮಡಿಕೇರಿ, ಆ.24: ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪರಿಶೀಲನೆಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಸರವಾದಿಗಳೊಂದಿಗೆ ಮಾತುಕತೆ ನಡೆಸಿ ಅವರ ಮನವಿ ಸ್ವೀಕರಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಶಾಸಕರ ಆಕ್ರೋಶಕ್ಕೆ ಕಾರಣವಾಯಿತಲ್ಲದೆ ಕೇಂದ್ರ ಸಚಿವೆ ಹಾಗೂ ಜನಪ್ರತಿನಿಧಿಗಳ ನಡುವೆ ವಾಗ್ವಾದ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧಿಕಾರಿಗಳ ಸಭೆಗೂ ಮುನ್ನ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಮೇಜರ್ ಬಿದ್ದಂಡ ನಂದ, ಮೇಜರ್ ಓ.ಎಸ್.ಚಿಂಗಪ್ಪ  ಸೇರಿದಂತೆ ಕೆಲವು ನಿವೃತ್ತ ಸೇನಾಧಿಕಾರಿಗಳು ಸಚಿವರನ್ನು ಭೇಟಿಯಾಗಲು ಬಂದರು. ಕೊಡಗಿನಲ್ಲಿ ಪರಿಸರ ಸಂರಕ್ಷಣೆಯಾಗಬೇಕು ಮತ್ತು ಪಶ್ಚಿಮಘಟ್ಟ ಉಳಿಸಲು ಡಾ.ಕಸ್ತೂರಿರಂಗನ್ ವರದಿ ಜಾರಿಯಾಗಬೇಕೆಂದು ವಾದಿಸುತ್ತಲೇ ಬಂದಿದ್ದ ಮಾಜಿ ಸೇನಾಧಿಕಾರಿಗಳು ಸಚಿವೆಯನ್ನು ಭೇಟಿ ಮಾಡಲು ಬಂದಿರುವುದನ್ನು ಗಮನಿಸಿದ ಸ್ಥಳೀಯ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಹ್ಮಣಿ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು. 

ಈ ನಡುವೆಯೇ ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಸೇನಾಧಿಕಾರಿಗಳೊಂದಿಗೆ ಕೊಡಗಿನ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಲು ಮುಂದಾದರು. ಇದು ಜನಪ್ರತಿನಿಧಿಗಳನ್ನು ಮತ್ತಷ್ಟು ಕೆರಳಿಸಿತು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಕೂಡ ಸಚಿವೆ ಈ ರೀತಿ ಅಧಿಕಾರಿಗಳ ಸಭೆ ಬಿಟ್ಟು ಡಾ.ಕಸ್ತೂರಿರಂಗನ್ ವರದಿ ಜಾರಿಯ ಪರವಾಗಿರುವವರೊಂದಿಗೆ ಮಾತುಕತೆ ನಡೆಸುತ್ತಿರುವುದರ ವಿರುದ್ಧ ತೀವ್ರ ಅತೃಪ್ತಿ ಹೊರಹಾಕಿದರು.

ಸಚಿವರು ತಕ್ಷಣ ಸಭೆಗೆ ಬರಬೇಕು, ಇಲ್ಲದಿದ್ದರೆ ಸಭಾತ್ಯಾಗ ಮಾಡುವುದಾಗಿ ಉಸ್ತುವಾರಿ ಸಚಿವರೂ ಸೇರಿದಂತೆ ಶಾಸಕರು ಪಟ್ಟು ಹಿಡಿದಾಗ ಸ್ಥಳದಲ್ಲಿದ್ದ ಸಂಸದ ಪ್ರತಾಪ್ ಸಿಂಹ ಗಲಿಬಿಲಿಗೊಳಗಾದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚರ್ಚೆ ನಡೆಸುತ್ತಿದ್ದಲ್ಲಿಗೆ ತೆರಳಿದ ಸಂಸದರು, 'ಸಭೆಗೆ ತಡವಾಗುತ್ತಿದೆ, ಸಚಿವ, ಶಾಸಕರು ಕಾಯುತ್ತಿದ್ದಾರೆ' ಎಂದಾಗ ಸಚಿವೆ ರೇಗಿದರಲ್ಲದೇ, 'ತಾನು ಮಾಜಿ ಸೈನಿಕರೊಂದಿಗೆ ಮಾತನಾಡುತ್ತಿದ್ದು, ಸೇನಾ ಜಿಲ್ಲೆಗೆ ಭೇಟಿ ನೀಡಿದ ಮೇಲೆ ಇವರೊಂದಿಗೂ ಚರ್ಚಿಸುವುದು ತನ್ನ ಕರ್ತವ್ಯ' ಎಂದರು. 

ನಿವೃತ್ತ ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅಲ್ಲಿಯೇ ಇದ್ದ ನಿವೃತ್ತ ಸೇನಾನಿಗಳ ಜತೆ ಚರ್ಚಿಸಲು ರಕ್ಷಣಾ ಸಚಿವರು ಮುಂದಾದರು. ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, 'ಮೇಡಂ, ಅಧಿಕಾರಿಗಳು ಸಾಕಷ್ಟು ಹೊತ್ತಿನಿಂದ ಕಾಯುತ್ತಿದ್ದಾರೆ. ಮೊದಲು ಸಭೆ ನಡೆಸಿ' ಎಂದು ಒತ್ತಾಯಪೂರ್ವಕವಾಗಿ ಹೇಳಿದರು. ಇದರಿಂದ ಸಿಟ್ಟಿಗೆದ್ದ ಸಚಿವೆ ನಿರ್ಮಲಾ ಸೀತಾರಾಮನ್, ನಾನು ನನ್ನ ಕಾರ್ಯಕ್ರಮ ಪಟ್ಟಿಯಾನುಸಾರ  ಮುಂದುವರೆಯುತ್ತಿದ್ದು, ನೀವು ಹೇಳುವ ಪ್ರಕಾರ ನಡೆಯಬೇಕೆಂದಿದ್ದರೆ ಹಾಗೇ ಮಾಡೋಣ ಎಂದರು. ಅಧಿಕಾರಿಗಳು ಪರಿಹಾರ ಕಾರ್ಯಾಚರಣೆ ಬಿಟ್ಟು ಸಭೆಗೆ ಯಾಕೆ ಬಂದರು ಎಂದೂ ಸಚಿವೆ ಪ್ರಶ್ನಿಸಿದರು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ 'ನಿಮಗನ್ನಿಸಿದ್ದನ್ನು ನೀವು ಮಾಡಿ' ಎಂದು ಸಿಟ್ಟಿನಿಂದಲೇ ಹೇಳಿದರು. ಇದರಿಂದ ವಿಚಲಿತರಾದ ರಕ್ಷಣಾ ಸಚಿವೆ, 'ನಾನು ಸೆಂಟ್ರಲ್ ಡಿಫೆನ್ಸ್ ಮಿನಿಸ್ಟರ್. ನೀವು ಹೇಳಿದಂತೆ ಕೇಳಬೇಕೆಂದು ನೀವು ಬಯಸುತ್ತಿದ್ದೀರಿ. ಸರಿ. ಹಾಗಿದ್ದರೆ ನಿಮ್ಮ ಇಚ್ಛೆಯಂತೆ ಸಭೆ ನಡೆಸೋಣ ಬನ್ನಿ' ಎಂದು ಹೇಳಿ ಹೊರಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಯೂ ಅಸಹನೆಯಿಂದಲೇ ಸಚಿವರು ಜಿಲ್ಲಾಧಿಕಾರಿ ಶ್ರೀವಿದ್ಯಾ ಪ್ರದರ್ಶಿಸಿದ ಕೊಡಗು ಪ್ರಕೃತಿ ವಿಕೋಪದ ಪ್ರಾತ್ಯಕ್ಷಿಕೆ ಗಮನಿಸಿದರು. ಒಂದು ಹಂತದಲ್ಲಿ ಯಾರು ಸಭೆಯಲ್ಲಿ ಮಾತನಾಡುವುದು ಎಂಬ ಪ್ರಶ್ನೆ ಎದ್ದಾಗ ಉಸ್ತುವಾರಿ ಸಚಿವರಿಗೆ ಸಚಿವೆ ಸೀತಾರಾಮ್ 'ಇದನ್ನೆಲ್ಲಾ ನೀವು ಮಾತನಾಡಿಕೊಂಡು ನಿರ್ಧರಿಸಿ. ನಿಮ್ಮೊಳಗಿನ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಿ' ಎಂದು ಆಕ್ರೋಶಿತರಾಗಿಯೇ ಹೇಳಿದರು. ಅಧಿಕಾರಿಗಳ ಸಭೆಯಲ್ಲಿಯೂ ಹೆಚ್ಚೇನು ಹೇಳದ ಸಚಿವೆ ನಿರ್ಮಲಾ ಸೀತಾರಾಮನ್ ತರಾತುರಿಯಿಂದಲೇ ಸಭೆಯನ್ನು ಮುಕ್ತಾಯಗೊಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News